ಮುಂಬೈ: ಭಾನುವಾರ ಕಾಣೆಯಾಗಿದ್ದ 11 ವರ್ಷದ ಬಾಲಕ ನಗರದ ಮನ್ಖುರ್ದ್ ಮಂಡಲಾ ಎಂಬ ಪ್ರದೇಶದ ಒಂದು ಕುಸಿದ ಮನೆಯ ಬಳಿ ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ.
ಜೆಟ್ಮೋಹನ್ ಶರ್ಮಾ ಮೃತ ದುರ್ದೈವಿ. ಈತ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಭಾನುವಾರ ಸಂಜೆ ಹನುಮ ಜಯಂತಿ ಮೆರವಣಿಗೆಯನ್ನು ವೀಕ್ಷಿಸಲು ಮನೆಯಿಂದ ತೆರಳಿದ್ದನು. ಆದರೆ ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ.
ಹನುಮ ಜಯಂತಿ ನೋಡಲು ಹೋದ ಮಗ ಮಧ್ಯರಾತ್ರಿಯ ಆದರೂ ಮನೆಗೆ ಹಿಂದಿರುಗಲಿಲ್ಲ ಎಂದು ಕುಟುಂಬದವರು ಅವನಿಗಾಗಿ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಬಳಿಕ ಗಾಬರಿಗೊಂಡು ಕುಟುಂಬದವರು ಮನ್ಖುರ್ದ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಬಾಲಕನ ದೇಹ ಆತನ ಮನೆಯಿಂದ ಕೇವಲ 50 ಅಡಿಗಳಷ್ಟು ದೂರವಿರುವ ಪ್ರತ್ಯೇಕ ಕಟ್ಟಡವೊಂದರಲ್ಲಿ ಪತ್ತೆಯಾಗಿದೆ. ಇದನ್ನು ನೋಡಿ ಬಾಲಕನ ಕುಟುಂಬ ಆಘಾತಗೊಂಡಿದೆ.
ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಇದು ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದೆ. ನಾವು ಬಾಲಕನ ದೇಹವನ್ನು ನೋಡಿದಾಗ ಇಲಿಗಳು ಆ ದೇಹವನ್ನು ತಿನ್ನುತ್ತಿದ್ದವು. ಈ ಸಾವಿನ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ನಂತರ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಪೊಲೀಸ್ ಅಧಿಕಾರಿ ಶಹಾಜಿ ಉಮಾಪ್ ಹೇಳಿದ್ದಾರೆ.