ಮಾಸ್ಕೋ: ಟರ್ಕಿಷ್, ಲಿಬಿಯನ್ ಹಾಗೂ ಭಾರತೀಯ ನಾವಿಕರು ಕಾರ್ಯ ನಿರ್ವಹಿಸುತ್ತಿದ್ದ 2 ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ರಷ್ಯಾದ ಕೆರ್ಚ್ ಜಲಸಂಧಿ ಬಳಿ ಸೋಮವಾರದಂದು ನಡೆದಿದೆ.
ಸೋಮವಾರದಂದು ರಷ್ಯಾದ ಪ್ರಾದೇಶಿಕ ಜಲಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ದುರಂತಕ್ಕೆ ಒಳಗಾದ 2 ಹಡಗುಗಳ ಮೇಲೆ ಕೂಡ ತಾಂಜಾನಿಯನ್ ಭಾವುಟವನ್ನು ಅಳವಡಿಸಲಾಗಿತ್ತು. 2 ಹಡಗುಗಳ ಪೈಕಿ ಒಂದು ಲಿಕ್ವಿಫಾಯ್ದ್ ನ್ಯಾಚುರಲ್ ಗಾಸ್(ಎಲ್ಎನ್ಜಿ) ಸಾಗಿಸುತ್ತಿದ್ದರೆ, ಇನ್ನೊಂದು ಹಡಗು ಟ್ಯಾಂಕರ್ ಗಳನ್ನು ಸಾಗಿಸುತ್ತಿತ್ತು. ಒಂದು ಎಲ್ಎನ್ಜಿ ತುಂಬಿದ್ದ ಹಡಗಿನಿಂದ ಟ್ಯಾಕರ್ ಹಡಗಿಗೆ ಇಂಧನವನ್ನು ವರ್ಗಾವಣೆ ಮಾಡುತ್ತಿದ್ದಾಗ ಈ ಅಗ್ನಿ ಅವಘಡ ಸಂಭವಿಸಿದೆ. ಇದನ್ನೂ ಓದಿ:ಕೂರ್ಮಗಡ ಬೋಟ್ ದುರಂತ- ಸಾವಿನ ಸಂಖ್ಯೆ 13ಕ್ಕೆ ಏರಿಕೆ
ಒಂದು ಹಡಗಿನಲ್ಲಿ 8 ಮಂದಿ ಭಾರತೀಯರು ಹಾಗೂ 9 ಮಂದಿ ಟರ್ಕಿ ನಾವಿಕರು ಸೇರಿ ಒಟ್ಟು 17 ಮಂದಿ ಇದ್ದರು. ಇನ್ನೊಂದರಲ್ಲಿ 7 ಮಂದಿ ಭಾರತೀಯರು, 7 ಮಂದಿ ಟರ್ಕಿ ನಾವಿಕರು ಹಾಗೂ ಓರ್ವ ಲಿಬಿಯಾದ ನಾವಿಕ ಸೇರಿ ಒಟ್ಟು 15 ಮಂದಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ದುರ್ಘಟನೆಯಿಂದ ಭಾರತೀಯರು ಸೇರಿದಂತೆ ಒಟ್ಟು 11 ಮಂದಿ ಮೃತಪಟ್ಟಿದ್ದು, 9 ಮಂದಿ ಕಾಣೆಯಾಗಿದ್ದಾರೆ. ಅಲ್ಲದೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಹಲವು ನಾವಿಕರು ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದು ಇವರೆಗೆ 12 ಮಂದಿಯನ್ನು ರಕ್ಷಣಾ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಹಾಗೆಯೇ ಕಾಣೆಯಾದವರನ್ನು ಹುಡುಕುವ ಕೆಲಸವನ್ನು ರಕ್ಷಣಾ ಪಡೆ ಮುಂದುವರಿಸಿದೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv