– ಬೇರೆ ಆರೋಗ್ಯ ಸಮಸ್ಯೆ ಇದ್ದವರು ಎಚ್ಚರದಿಂದಿರಿ – ದಿನೇಶ್ ಗುಂಡೂರಾವ್
ಹುಬ್ಬಳ್ಳಿ/ಧಾರವಾಡ/ಮಂಡ್ಯ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು (Corona Virus) ಪ್ರಕರಣಗಳು ಹೆಚ್ಚಾಗುತ್ತಿವೆ. ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೊರೊನಾ ಕಾಣಿಸಿಕೊಂಡಿದೆ. ಅಲ್ಲದೇ ಮಂಡ್ಯದಲ್ಲೂ (Mandya) ಈ ಬಾರಿ ಮೊದಲ ಸೋಂಕು ಪತ್ತೆಯಾಗಿದೆ.
ಹುಬ್ಬಳ್ಳಿಯ (Hubballi) ಬೈರಿದೇವರಕೊಪ್ಪ ಗ್ರಾಮದ 11 ತಿಂಗಳ ಮಗುವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗುವಿಗೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಹೋದಾಗ ಕೋವಿಡ್ ಇರೋದು ಪತ್ತೆಯಾಗಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದೆ ಅಂತ ಧಾರವಾಡ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಮಂಡ್ಯದಲ್ಲಿ ಮೊದಲ ಕೇಸ್ ಪತ್ತೆ:
ಇನ್ನೂ ಈ ವರ್ಷ ಮಂಡ್ಯದಲ್ಲಿ 60 ವರ್ಷದ ವೃದ್ಧೆಯಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹರಕೆರೆ ಗ್ರಾಮದ ಕಲ್ಯಾಣಮ್ಮ ಎಂಬ ವೃದ್ಧೆಗೆ ಸೋಂಕು ಕಾಣಿಸಿಕೊಂಡಿದೆ. ಗ್ರಾಮದ ನಿವಾಸದಲ್ಲೇ ಇದ್ದ ಕಲ್ಯಾಣಮ್ಮ, ಕಳೆದ 2 ದಿನಗಳಿಂದ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿದ್ದರು. ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದ್ದು, ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇರೆ ಬೇರೆ ಕಾಯಿಲೆ ಇದ್ದವರು ಎಚ್ಚರದಿಂದಿರಿ
ಕೊರೊನಾ ಸೋಂಕು ಉಲ್ಬಣದ ಕುರಿತು ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ಈ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಏನಿಲ್ಲ ಹಿಂದೆ ಏನು ಸೂಚನೆ ಕೊಟ್ಟಿದ್ದೆವೊ ಅಷ್ಟೆ. ಸದ್ಯಕ್ಕೆ ವಿಶೆಷವಾಗಿ ಹೇಳುಂತದ್ದು ಏನೂ ಇಲ್ಲ. ಕೇಂದ್ರ ಸರ್ಕಾರ ಸಹ ಇದು ಅಪಾಯಕಾರಿ ಏನಲ್ಲ ಅಂತ ಮೆಸೇಜ್ ಕೊಟ್ಟಿದೆ. ಸಣ್ಣ ಪ್ರಮಾಣದಲ್ಲಿ ತೊಂದರೆ ಆಗಬಹುದೇ ಹೊರತು ಅಪಾಯಕಾರಿ ಅಲ್ಲ ಎಂದು ವಿಶ್ಲೇಷಣೆ ಮಾಡಿದ್ದಾರೆ. ಹಾಗಾಗಿ ಜನ ಆತಂಕಪಡುವ ಅಗತ್ಯವಿಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ಕಾಯಿಲೆ ಇದ್ದಾಗ ಇದು ಸಮಸ್ಯೆ ಆಗಬಹುದು, ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಅಷ್ಟೆ ಅಂತ ಸಲಹೆ ನೀಡಿದ್ದಾರೆ.