ಬಗೋಟ: ಕೊಲಂಬಿಯಾದ ಬಗೋಟ ಸಮೀಪದ ಕುಕುನುಬಾ ಗಣಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 11 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಶನಿವಾರ ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟಿಸಿ ಈ ದುರಂತ ಸಂಭವಿಸಿದೆ. ಸ್ಫೋಟದಿಂದ ಕುಕುನುಬಾ ಗಣಿ ಕುಸಿದ ಪರಿಣಾಮ 11 ಮಂದಿ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗೊಂಡಿದ್ದಾರೆ. ಗಣಿಯಲ್ಲಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ತಾಂತ್ರಿಕ ತನಿಖಾ ತಂಡದ ಸಿಬ್ಬಂದಿ ಹೊರತೆಗೆದಿದ್ದಾರೆ. ಇತ್ತ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೀಥೇನ್ ಅನಿಲ ಮತ್ತು ಕಲ್ಲಿದ್ದಲು ಧೂಳಿನಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಶುಕ್ರವಾರ ಈಶಾನ್ಯ ಕೊಲಂಬಿಯಾದ ಸ್ಯಾನ್ ಕೆಯೆಟಾನೊದಲ್ಲಿರುವ ಕಲ್ಲಿದ್ದಲು ಗಣಿಯಲ್ಲೂ ಹೀಗೆ ಸ್ಫೋಟ ಸಂಭವಿಸಿದ ಪರಿಣಾಮ 6 ಮಂದಿ ಕಾರ್ಮಿಕರು ಬಲಿಯಾಗಿದ್ದರು.
ಕೊಲಂಬಿಯಾದಲ್ಲೂ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿದ್ದು, ಇಡೀ ಕೊಲಂಬಿಯಾವನ್ನು ಲಾಕ್ಡೌನ್ ಮಾಡಲಾಗಿದೆ. ಆದರೆ ಈ ಲಾಕ್ಡೌನ್ ನಡುವೆ ದೇಶದ ಪ್ರಮುಖ ಕ್ಷೇತ್ರಗಳಾದ ಗಣಿಗಾರಿಕೆಯನ್ನು ಹೊರತುಪಡಿಸಿ ಎಲ್ಲಾ ಸೇವೆಗಳು, ವಲಯಗಳನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಕೊಲಂಬಿಯಾದಲ್ಲಿ ಗಣಿ ಕಾರ್ಯ ಮುಂದುವರೆದಿತ್ತು.
ಈ ಎರಡೂ ಗಣಿಯಲ್ಲಿ ಸ್ಫೋಟಗಳು ವರದಿಯಾದ ಬಳಿಕ ರಾಜ್ಯ ಸರ್ಕಾರ ನಡೆಸುವ ರಾಷ್ಟ್ರೀಯ ಗಣಿ ಸಂಸ್ಥೆ, ಕುಕುನುಬಾದಲ್ಲಿ ಭೂಮಿಯ ಕೆಳಗಿನ ಕಲ್ಲಿದ್ದಲು ಗಣಿಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.