ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್ನ ಟಿಂಬರ್ ಗೋಡಾನ್ನಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದ್ದು, ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.
ಸಿಕಂದರಾಬಾದ್ನ ಬೋಯಗೂಡದ ಟಿಂಬರ್ ಗೋಡಾನ್ನಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದ 11 ಜನರು ಬಿಹಾರ್ ಮೂಲದವರಾಗಿದ್ದರು. ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಸಮೀಪವಿರುವ ಜನಬಿಡ ವಸತಿ ಕಾಲೋನಿಯಲ್ಲಿ ಸುಮಾರು 13 ಕಾರ್ಮಿಕರು ಗೋದಾಮಿನ ಮೇಲಿನ ಮಹಡಿಯಲ್ಲಿ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮರದ ದಿಮ್ಮಿಗಳು, ಉರುವಲುಗಳ ಸಂಗ್ರಹ ಇದ್ದಿದ್ದರಿಂದ ಬೆಂಕಿ ಬಹುಬೇಗ ಹರಡಿತು. ಕಾರ್ಮಿಕರು ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ದಟ್ಟವಾದ ಹೊಗೆಯೊಂದಿಗೆ ಬೆಂಕಿ ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಎಂಟು ಅಗ್ನಿಶಾಮಕ ಭೇಟಿ ನೀಡಿದ್ದು, ಬೆಳಿಗ್ಗೆ 7ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಇಲ್ಲಿಯವರೆಗೆ 11 ಶವಗಳನ್ನು ತೆಗೆಯಲಾಗಿದ್ದು, ಅವೆಲ್ಲವೂ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಗುರುತಿಸಲಾಗದ ಸ್ಥಿತಿಯಲ್ಲಿವೆ. ಮತ್ತೊಬ್ಬ ಕಾರ್ಮಿಕ ಬೆಂಕಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ಗಾಂಧಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಸತತ 2ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ
ಘಟನಾ ಸ್ಥಳಕ್ಕೆ ರಾಜ್ಯ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಶಾಲೆಗೆ ಭಗತ್ ಸಿಂಗ್ ಹೆಸರು: ಕೇಜ್ರಿವಾಲ್