– 13 ಸಾವಿರ ನಗದು, 3 ಮೊಬೈಲ್ ಪತ್ತೆಯಾಗಿತ್ತು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ವ್ಯಕ್ತಿಯ ಬ್ಯಾಗಿನಲ್ಲಿ ಪತ್ತೆಯಾಗಿದ್ದ 13 ಸಾವಿರ ಹಣ ಹಾಗೂ 3 ಮೊಬೈಲ್ನನ್ನು 108 ಅಂಬುಲೆನ್ಸ್ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳವಾರ ಮೆಜೆಸ್ಟಿಕ್ ಬಳಿ ಓರ್ವ ವ್ಯಕ್ತಿ ಅನ್ಯಾರೋಗ್ಯದಿಂದ ಬಳಲುತ್ತಿದ್ದಾನೆ ತುರ್ತಾಗಿ ಬನ್ನಿ ಎಂದು 108ಗೆ ಕರೆ ಬಂದಿತ್ತು. ಹೀಗಾಗಿ ಸಿಬ್ಬಂದಿ ಪ್ರಶಾಂತ್ ಹಾಗೂ ಈರಣ್ಣ ಅಂಗಡಿ ಅವರು ಅಂಬುಲೆನ್ಸ್ನಲ್ಲಿ ಸ್ಥಳಕ್ಕೆ ತೆರೆಳಿದ್ದರು. ಆದರೆ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿ ರೋಗಿ ಮೃತಪಟ್ಟಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಮೃತನ ಬಳಿಯಿದ್ದ ಬ್ಯಾಗ್ ತೆರೆದು ನೋಡಿದಾಗ, ಅದರಲ್ಲಿ 13 ಸಾವಿರ ಹಣ, 3 ಮೊಬೈಲ್ ಹಾಗೂ ಐಡಿ ಕಾರ್ಡ್ ಪತ್ತೆಯಾಗಿತ್ತು. ಇದನ್ನೂ ಓದಿ:1 ಲಕ್ಷ ರೂ. ಮೌಲ್ಯದ ಬಂಗಾರದ ಒಡವೆ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ಈ ಹಣವನ್ನು ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳದೆ ಪ್ರಾಮಾಣಿಕರಾಗಿ ಮೃತನ ಬಳಿ ಪತ್ತೆಯಾಗಿದ್ದ ನಗದು ಹಾಗೂ ವಸ್ತುಗಳನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಇದನ್ನೂ ಓದಿ:6.50 ಲಕ್ಷ ಮೌಲ್ಯದ ಒಡವೆಯನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್
ಹಣ ಕಂಡರೆ ಹೆಣಾನೂ ಬಾಯಿ ಬಿಡುತ್ತೆ ಎನ್ನುವ ಮಾತಿದೆ. ಹಣಕ್ಕಾಗಿ ಅದೇಷ್ಟೋ ಜನರನ್ನು ಕೊಲೆ ಮಾಡಿರುವ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಹೀಗಿರುವಾಗ ತಮಗೆ ಸಿಕ್ಕ ಹಣವನ್ನು ತೆಗೆದುಕೊಳ್ಳದೆ ಪ್ರಶಾಂತ್ ಹಾಗೂ ಈರಣ್ಣ ಅವರು ಪ್ರಾಮಾಣಿಕತೆ ಮೆರೆದಿರುವುದು ಎಲ್ಲರ ಮನ ಗೆದ್ದಿದೆ. ಅಂಬುಲೆನ್ಸ್ ಸಿಬ್ಬಂದಿಯ ಕಾರ್ಯಕ್ಕೆ ಉಪ್ಪಾರಪೇಟೆ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.