ಮುಂಬೈ: ಕಳೆದ ವಾರ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಓರ್ವ ಸಾಧು ಸೇರಿ ಮೂವರ ಮೇಲೆ ನಡೆದ ಸಾಮೂಹಿಕ ದಾಳಿಗೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲಾಗಿರುವ 101 ಜನರಲ್ಲಿ ಯಾರೂ ಮುಸ್ಲಿಮರಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.
ಇಂದು ಕೊರೊನಾ ವೈರಸ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಮಾತನಾಡಲು ಫೇಸ್ ಬುಕ್ನಲ್ಲಿ ಲೈವ್ ಬಂದಿದ್ದ ಅನಿಲ್ ದೇಶ್ಮುಖ್, ವಿರೋಧ ಪಕ್ಷವಾದ ಬಿಜೆಪಿಯ ಮೇಲೆ ಕಿಡಿಕಾರಿದ್ದಾರೆ. ಈ ಘಟನೆಯನ್ನೇ ಮುಂದೆ ಇಟ್ಟುಕೊಂಡು ಬಿಜೆಪಿ ಪಕ್ಷ ಇದಕ್ಕೆ ಕೋಮುವಾದದ ಬಣ್ಣ ಹಚ್ಚಲು ಪ್ರಯತ್ನಿಸುತ್ತದೆ ಎಂದು ಆರೋಪಿಸಿದ್ದಾರೆ.
ಸಾಧು ಮೇಲೆ ದಾಳಿಯಲ್ಲಿ ಭಾಗಿಯಾದ 101 ಜನರನ್ನು ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು ಇಲ್ಲ. ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ ಬಿಜೆಪಿ ಇದು ಮುಸ್ಲಿಮರೇ ಮಾಡಿರುವ ಕೃತ್ಯ ಎಂದು ಬಿಂಬಿಸಲು ಹೊರಟಿತ್ತು. ರಾಜಕೀಯವಾಗಿ ಹೊಡೆದಾಡಿಕೊಳ್ಳುವ ಸಮಯವಿದಲ್ಲ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ದೇಶ್ಮುಖ್ ತಿಳಿಸಿದ್ದಾರೆ.
The Palghar incident has been acted upon. The police has arrested all those accused who attacked the 2 sadhus, 1 driver and the police personnel, on the day of the crime itself.
— CMO Maharashtra (@CMOMaharashtra) April 19, 2020
ಮುಂಬೈನಿಂದ ಸುಮಾರು 125 ಕಿ.ಮೀ ದೂರದಲ್ಲಿ ನಡೆದ್ದ ಈ ಭಯಾನಕ ಘಟನೆಯ ಬಗ್ಗೆ ಮಾತನಾಡಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ಘಟನೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಈ ದಾಳಿಯಲ್ಲಿ ಹಿಂದು ಮುಸ್ಲಿಂ ಎಂಬ ಕೋಮುವಾದದ ಬಣ್ಣ ಇಲ್ಲ. ಈ ವಿಚಾರವಾಗಿ ತಕ್ಷಣ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದೇವೆ ಎಂದು ಟ್ವೀಟ್ ಮಾಡಿ ಕೋಮುವಾದ ಸೃಷ್ಟಿಸುತ್ತಿರುವರಿಗೆ ಎಚ್ಚರಿಕೆ ಎಂದು ವಾರ್ನಿಂಗ್ ನೀಡಿದ್ದರು.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಮೂವರಲ್ಲಿ ಒಬ್ಬರು 70 ವರ್ಷದ ಸಾಧು ಕೂಡ ಇದ್ದರು. ಜನರು ದೊಣ್ಣೆ ಮತ್ತು ಕಲ್ಲಿನಿಂದ ಓರ್ವನನ್ನು ಸಾಯುವ ಹಾಗೇ ಹೊಡೆಯುತ್ತಿದ್ದ ವಿಡಿಯೋ ವೈರಲ್ ಕೂಡ ಆಗಿತ್ತು. ಜೊತೆಗೆ ಇವರನ್ನು ರಕ್ಷಣೆ ಮಾಡಲು ಬಂದ ಪೊಲೀಸರ ಮೇಲೂ ಹಲ್ಲೆ ಮಾಡಿ ಅವರ ವಾಹನವನ್ನು ಜಖಂ ಮಾಡಲಾಗಿತ್ತು.
ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಕೈಲಾಶ್ ಶಿಂಧೆ, ಲಾಕ್ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಕಳ್ಳತನ ಮಾಡಲು ಗ್ರಾಮಗಳಿಗೆ ಬರುತ್ತಾರೆ. ಜೊತೆಗೆ ಮಕ್ಕಳನ್ನು ಕದ್ದುಕೊಂಡು ಹೋಗುತ್ತಾರೆ ಎಂಬ ವಂದತಿ ಸುತ್ತಮುತ್ತಲಿನ ಗ್ರಾಮದಲ್ಲಿ ಹರಿದಾಡುತ್ತಿತ್ತು. ಹೀಗಾಗಿ ಆ ಊರಿನ ಯುವಕರು ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಈ ಸಾಧು ಅವರು ಅಲ್ಲಿಗೆ ಹೋಗಿದ್ದಾರೆ. ಅನುಮಾನಗೊಂಡ ಗ್ರಾಮದವರು ಅವರನ್ನು ಥಳಿಸಿದ್ದಾರೆ ಎಂದು ಹೇಳಿದ್ದಾರೆ.