ತಿರುಪತಿ: ತಿಮ್ಮಪ್ಪನ ವಾರ್ಷಿಕ ಬ್ರಹ್ಮ ರಥೋತ್ಸವ ಶುರುವಾಗಿದ್ದು ಭಕ್ತಾಧಿಗಳು ಹಲವು ಕಾಣಿಕೆಯನ್ನು ಒಪ್ಪಿಸುತ್ತಿದ್ದಾರೆ. ಅಂತೆಯೇ ವಿಜಯವಾಡ ಮೂಲದ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನಿಗೆ ಸುಮಾರು 8.36 ಕೋಟಿ ರೂಪಾಯಿ ಮೌಲ್ಯದ ‘ಸಹಸ್ರ ನಾಮ ಮಾಲಾ’ (ಸ್ವರ್ಣ ಹಾರ) ಕಾಣಿಕೆಯಾಗಿ ಅರ್ಪಿಸಿದ್ದಾರೆ.
ರಾಮಲಿಂಗ ರಾಜು ಎಂಬವರು ಹಬ್ಬ ಮೊದಲನೇ ದಿನದಂದೇ ಸುಮಾರು 28 ಕೆ.ಜಿ ತೂಕದ ವೆಂಕಟೇಶ್ವರನ 1008 ಪವಿತ್ರ ನಾಮಗಳ 1008 ಸ್ವರ್ಣ ನಾಣ್ಯಗಳಿಂದ ಸಿದ್ಧಪಡಿಸಿರುವ ಹಾರವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಉಪಸ್ಥಿತಿಯಲ್ಲಿ ತಿಮ್ಮಪ್ಪನಿಗೆ ಸಮರ್ಪಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ಹೇಳುವಂತೆ, ಪ್ರತೀ ವರ್ಷದ ಬ್ರಹ್ಮ ರಥೋತ್ಸವ ಹಬ್ಬದಂದು ಭಕ್ತಾದಿಗಳು ವಿವಿಧ ರೀತಿಯ ಕಾಣಿಕೆಯನ್ನು ತಿಮ್ಮಪ್ಪನಿಗೆ ಒಪ್ಪಿಸುತ್ತಾರೆ. ಅಂತೆಯೆ ರಾಮಲಿಂಗ ರಾಜು ಕೂಡ ದೇವರಿಗೆ ಕಾಣಿಕೆ ನೀಡಿದ್ದಾರೆ.
ಪ್ರತಿವರ್ಷ ಆಂಧ್ರ ಸರ್ಕಾರ ತಿಮ್ಮಪ್ಪನಿಗೆ ಹಲವಾರು ಕಾಣಿಕೆಯನ್ನು ನೀಡುತ್ತಾ ಬರುತ್ತಿದೆ. ಮೊದಲ ದಿನವಾದ್ದರಿಂದ ಸರ್ಕಾರದ ಪರವಾಗಿ ಚಂದ್ರಬಾಬು ನಾಯ್ಡು ತಿಮ್ಮಪ್ಪನಿಗೆ ರೇಷ್ಮೆ ಉಡುಪನ್ನು ಕಾಣಿಕೆ ನೀಡಿದೆ ಎಂದು ದೇವಸ್ಥಾನ ಮಂಡಳಿಯ ಮೂಲಗಳು ತಿಳಿಸಿವೆ.