ಕಾರವಾರ: ತಮ್ಮ ಧರ್ಮದಲ್ಲಿಯೇ ಬೇರೊಬ್ಬ ಗುರುಗಳನ್ನು ಅನುಸರಿಸಿದ್ದಕ್ಕೆ 10 ಕುಟುಂಬಗಳಿಗೆ ಜಮಾತ್ನಿಂದ ಬಹಿಷ್ಕಾರ ಹಾಕಿ ಕಿರುಕುಳ ನೀಡುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಇದು ಕಾರವಾರದ ಸದಾಶಿವಗಡ ಎಂಬ ಊರು. ಇಲ್ಲಿನ ಸುಮಾರು 10 ಕುಟುಂಬಗಳು ಮುಸ್ಲಿಂ ಧರ್ಮದ ಆಂಧ್ರ ಮೂಲದ ದಾವುಲ್ ಆಲಿಷಾ ಎಂಬ ಗುರುಗಳ ನಿಯಮಗಳನ್ನು ಅನುಸರಿಸುತಿದ್ದರು. ಆದರೆ ಇದಕ್ಕೆ ಜಮಾತ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೇರೊಬ್ಬ ಗುರುವನ್ನು ಅನುಸರಿಸಿದ್ದಕ್ಕೆ 25 ವರ್ಷಗಳಿಂದ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಕುಟುಂಬಗಳ ಮನೆಗೆ, ಕಾರ್ಯಕ್ರಮಕ್ಕೆ ಯಾರೂ ಹೋಗದಂತೆ ಸಮುದಾಯದವರಿಗೆ ಫರ್ಮಾನು ಹೊರಡಿಸಿದ್ದಾರೆ.
ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಲ್ಲದೇ ಈ ಕುಟುಂಬಗಳಲ್ಲಿ ಯಾವುದೇ ಹೆಣ್ಣುಮಕ್ಕಳನ್ನು ಬೇರೊಬ್ಬರು ಮದುವೆಯಾಗದಂತೆ ಈ ಜಮಾಯಿತ್ ಸದಸ್ಯರು ತಡೆದಿದ್ದಾರಂತೆ. ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ತಹಶೀಲ್ದಾರ್ ನೇತೃತ್ವದ ಸಮಿತಿ ಈ ಬಗ್ಗೆ ಆದೇಶ ಮಾಡಿತ್ತು. ಇನ್ನು ವಕ್ಫ್ ಮಂಡಳಿಗೆ ಬಹಿಷ್ಕಾರದ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರು. 4 ಬಾರಿ ಸಭೆ ಕರೆದರೂ ಸಭೆಗೆ ಗೈರಾದ ಜಮಾತ್ ಸದಸ್ಯರು ಮತ್ತೆ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಸಾಮಾಜಿಕ ಬಹಿಷ್ಕಾರದಿಂದ ಕುಟುಂಬದ ಸದಸ್ಯರು ನರಕಯಾತನೆ ಅನುಭವಿಸುತ್ತಿದ್ದಾರೆ.
ಏನೇಯಾದರು ಸಮಾಜ ಎಷ್ಟೇ ಮುಂದುವರಿದಿದ್ದರು ಬಹಿಷ್ಕಾರದಂತ ಪದ್ದತಿ ಇನ್ನೂ ಜೀವಂತವಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ವಕ್ಫ್ ಮಂಡಳಿ ಈ ಬಗ್ಗೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದ್ದು ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv