25 ಲಕ್ಷ ಉದ್ಯೋಗಾವಕಾಶ, 1 ಟ್ರಿಲಿಯನ್ ಡಾಲರ್‌ ಆರ್ಥಿಕ ಗುರಿ, ಉದ್ಯಮಿಗಳಿಗೆ ಬೆಂಬಲ – ಮಹಾರಾಷ್ಟ್ರಕ್ಕೆ ಬಿಜೆಪಿ 25 ಗ್ಯಾರಂಟಿ

Public TV
3 Min Read
Amit Shah BJP Manifesto

ಮುಂಬೈ: ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Assembly Election) ಹಿನ್ನೆಲೆ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಪ್ರಣಾಳಿಕೆ (Manifesto) ಬಿಡುಗಡೆ ಮಾಡಿದ್ದು, 25 ಭರವಸೆಗಳನ್ನು ನೀಡಿದೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah), ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಸೇರಿದಂತೆ ಪಕ್ಷದ ಹಿರಿಯ ನಾಯಕರು ʻಸಂಕಲ್ಪ ಪತ್ರʼ ಬಿಡುಗಡೆಗೊಳಿಸಿದರು. ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೇಲಾರ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಉಪಸ್ಥಿತರಿದ್ದರು. ಇದನ್ನೂ ಓದಿ: ಮಹಿಳೆಯರಿಗೆ 3,000 ರೂ., ನಿರುದ್ಯೋಗ ಯುವಕ, ಯುವತಿಯರಿಗೆ 4,000 ರೂ. ಭತ್ಯೆ; ಕಾಂಗ್ರೆಸ್‌ ʻಮಹಾʼ ಗ್ಯಾರಂಟಿ!

ಏನೇನು ಭರವಸೆ?
ಮುಂದಿನ 5 ವರ್ಷಗಳಲ್ಲಿ ರಾಜ್ಯದ ಯುವಜನತೆಗೆ 25 ಲಕ್ಷ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ. ಅಲ್ಲದೇ ರೈತರ ಸಾಲ ಮನ್ನಾ ಜೊತೆಗೆ ʻಲಡ್ಕಿ ಬೆಹನ್ʼ ಯೋಜನಾ ಭತ್ಯೆಯನ್ನು 1,500 ರಿಂದ 2,100ಕ್ಕೆ ಹೆಚ್ಚಿಸುವುದು ಸೇರಿದಂತೆ 25 ಭರವಸೆಗಳನ್ನು ಈಡೇರಿಸುವುದಾಗಿ ಮೈತ್ರಿಕೂಟವು ಪ್ರತಿಜ್ಞೆ ಮಾಡಿದೆ. ಮುಖ್ಯವಾಗಿ ʻಮಿಷನ್‌ ಒಲಿಂಪಿಕ್ಸ್‌ 36ʼ ನಮ್ಮ ಗುರಿ. ಅಲ್ಲದೇ 1 ಟ್ರೆಲಿಯನ್‌ ಡಾಲರ್‌ ಆರ್ಥಿಕತೆಯ ಗುರಿ ಸಾಧಿಸುವುದು, ನಾಗ್ಪುರ, ಪುಣೆ, ನಾಸಿಕ್‌ನಂತರ ನಗರಗಳನ್ನು ಏರೋಸ್ಪೇಸ್‌ ಹಬ್‌ ಮಾಡುವುದು, 50 ಲಕ್ಷ ಮಹಿಳೆಯರನ್ನು ಲಖ್ಪತಿ ದೀದಿಗಳನ್ನಾಗಿ ಮಾಡುವುದು, ಸರ್ಕಾರಿ ಶಾಲೆಗಳಲ್ಲಿ AI ತರಬೇತಿ, ಕೌಶಲ್ಯ ಗಣತಿ, ಉದ್ಯಮಿಗಳಿಗೆ ಬೆಂಬಲ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವುದು ನಮ್ಮ ಗುರಿ. ಈ‌ ಭರವಸೆಗಳನ್ನು ಸರ್ಕಾರ ರಚನೆಯಾದ 100 ದಿನಗಳಲ್ಲಿ ಈಡೇರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅಮಿತ್‌ ಶಾ, ಬಿಜೆಪಿ ಪ್ರಣಾಳಿಕೆಯು ಮಹಾರಾಷ್ಟ್ರದ ಜನತೆಯ ಆಕಾಂಕ್ಷೆಗಳ ನಿಜವಾದ ಪ್ರತಿಬಿಂಬವಾಗಿದೆ. ಮಹಾರಾಷ್ಟ್ರ ಸಾಮಾಜಿಕ ಸುಧಾರಣೆಗೆ ದಾರಿ ಮಾಡಿಕೊಟ್ಟಿದೆ. ಈ ರಾಜ್ಯದ ಆಕಾಂಕ್ಷೆಗಳು ಪ್ರಣಾಳಿಕೆಯಲ್ಲಿ ಪ್ರತಿಫಲಿಸುತ್ತದೆ. ಛತ್ರಪತಿ ಶಿವಾಜಿ ಮಹರಾಜ್‌ ಕೂಡ ಇಲ್ಲಿಯೇ ತಮ್ಮ ಪ್ರಯಾಣ ಆರಂಭಿಸಿದರು ಎಂದು ಸ್ಮರಿಸಿದ್ದಾರೆ.

ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿ, ಮಹಾರಾಷ್ಟ್ರದ ಜನತೆ ಬಿಜೆಪಿ, ಮಹಾಯುತಿ ಮೈತ್ರಿಯನ್ನು ನಂಬುತ್ತಾರೆ. ನಾವು ಘೋಷಣೆ ಮಾಡಿರುವ 25 ಪ್ರಮುಖ ಭರವಸೆಗಳಲ್ಲಿ ʻಲಡ್ಕಿ ಬೆಹೆನ್ʼ, ಕೃಷಿ ಸಾಲ ಮನ್ನಾ ಯೋಜನೆಗಳೂ ಸೇರಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

ಮಹಾರಾಷ್ಟ್ರದ 288 ಕ್ಷೇತ್ರಗಳಿಗೆ ಇದೇ ನವೆಂಬರ್‌ 20 ರಂದು ಚುನಾವಣೆ ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಪೆರೋಲ್ ಮೇಲೆ ಹೊರಬಂದಿದ್ದ ಕೊಲೆ ಅಪರಾಧಿಗೆ ಗುಂಡಿಕ್ಕಿ ಹತ್ಯೆ – ಗ್ಯಾಂಗ್‌ಸ್ಟರ್‌ ಅರ್ಷದೀಪ್ ಸಹಚರರ ಬಂಧನ

Share This Article