ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಇಬ್ಬರು ಮಹಿಳೆಯರ ಬರ್ಬರ ಕೊಲೆಯನ್ನು ಕಂಡು ಜನರು ಬೆಚ್ಚಿ ಬಿದ್ದಿದ್ರೆ, ಪೊಲೀಸರು ಪ್ರಕರಣ ಬೇಧಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಯಾಕೆಂದರೆ ಕೊಲೆಯಾಗಿರುವ ಮಹಿಳೆಯರ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ಇದೀಗ ಮಂಡ್ಯ ಪೊಲೀಸರು ಆ ಮಹಿಳೆಯರ ಗುರುತು ಹೇಳಿದ್ರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಏನಿದು ಪ್ರಕರಣ?
ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೇ ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಲ್ಲೂ ಇದೇ ತಿಂಗಳ 7ನೇ ತಾರೀಖಿನಂದು ಬೆಳಕಿಗೆ ಬಂದಿರುವ ಇಬ್ಬರು ಮಹಿಳೆಯರ ಬರ್ಬರ ಕೊಲೆಯಂತು ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಈ ಕೊಲೆಗಳು ಯಾರ ಊಹೆಗೂ ಸಿಗದ ಹಾಗೆ ಜರುಗಿರುವ ಕಾರಣ ಮಂಡ್ಯ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ.
ಇದೇ ತಿಂಗಳ 7ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕೆರೆಯ ಕಾಲುವೆಯಲ್ಲಿ ಸುಮಾರು 35 ವರ್ಷದ ಮಹಿಳೆಯನ್ನು ಕೊಲೆ ಮಾಡಿ ದೇಹವನ್ನು 2 ತುಂಡು ಮಾಡಿ ಸೊಂಟದ ಕೆಳಭಾಗದ ತುಂಡನ್ನು ಕಾಲು ಕಟ್ಟಿ ಎಸೆದು ಹೋಗಿರುವುದು ಪತ್ತೆಯಾಗಿತ್ತು. ಇದೇ ಮಾದರಿಯಲ್ಲಿ ಸುಮಾರು 28 ರಿಂದ 30 ವರ್ಷದ ಮಹಿಳೆಯ ಶವವೂ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಚಿಕ್ಕದೇವರಾಜ ನಾಲೆಯ ಪಕ್ಕದ ಜಮೀನಿನಲ್ಲಿ ಕಾಣಿಸಿಕೊಂಡಿತ್ತು. ಈ 2 ಭೀಕರ ಕೊಲೆಯನ್ನು ಕಂಡ ಜನರು ಬೆಚ್ಚಿಬಿದ್ದಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ – ಸುಳಿವು ಕೊಟ್ಟ ಸಂಜಯ್ ರಾವತ್
ಪೊಲೀಸರಿಗೆ ತಲೆನೋವು:
ಈ ಎರಡೂ ಕೊಲೆಗಳನ್ನು ಭೇದಿಸುವ ನಿಟ್ಟಿನಲ್ಲಿ ಪಾಂಡವಪುರ ಹಾಗೂ ಅರಕೆರೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು 100 ಮಂದಿಯ ತಂಡವನ್ನು ನಿಯೋಜಿಸಿ, ಕೊಲೆಯಾಗಿರುವ ಮಹಿಳೆಯರ ಮುಖದ ಭಾಗವನ್ನು ಹುಡುಕಲು ಶೋಧ ಮಾಡುತ್ತಾರೆ. ಆದರೆ ಇದುವರೆಗೆ ಮಹಿಳೆಯರ ಮುಖದ ಭಾಗದ ದೇಹದ ತುಂಡು ಪತ್ತೆಯಾಗಿಲ್ಲ. ಮೊದಲು ಕೊಲೆಯಾದ ಮಹಿಳೆಯರು ಯಾರು ಎಂದು ಪತ್ತೆ ಮಾಡಿದರೆ ಮಾತ್ರವೇ ಹಂತಕರನ್ನು ಹಿಡಿಯಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಯಾವುದೇ ಕಾರಣಕ್ಕೂ ಉಳಿಯುವುದಿಲ್ಲ: ಈಶ್ವರಪ್ಪ
ಸುಳಿವಿಗೆ 1 ಲಕ್ಷ ಬಹುಮಾನ:
ಈ ಕೇಸ್ನಲ್ಲಿ ಕರ್ನಾಟಕ ರಾಜ್ಯವಲ್ಲದೇ ಅಕ್ಕ-ಪಕ್ಕದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ನಾಪತ್ತೆಯಾಗಿರುವ ಮಹಿಳೆಯರ ವರದಿಯನ್ನು ತೆಗೆದು ನೋಡಿದಾಗಲೂ ಇಲ್ಲಿ ದೊರೆತಿರುವ ಮಹಿಳೆಯರ ಶವದ ತುಂಡಿಗೆ ಹೊಂದಾಣಿಕೆಯಾಗಿಲ್ಲ. ಹೀಗಾಗಿ ಮಹಿಳೆಯರು ಧರಿಸಿರುವ ಬಟ್ಟೆಯ ಆಧಾರವನ್ನು ಇಟ್ಟುಕೊಂಡು ಪೊಲೀಸರು ಕರಪತ್ರ ಅಭಿಯಾನವನ್ನು ಮಾಡಿದ್ದಾರೆ. ಮಂಡ್ಯ ಪೊಲೀಸ್ ಇಲಾಖೆ ಮಹಿಳೆಯರ ಗುರುತು ಹೇಳಿದರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಅಲ್ಲದೇ ತಮ್ಮ ಅಕ್ಕ-ಪಕ್ಕದ ಮನೆಯವರು ಹಲವು ದಿನಗಳಿಂದ ಕಾಣೆಯಾಗಿದ್ದರೆ, ಅವರ ಮಾಹಿತಿಯನ್ನು ನೀಡಿ ಎಂದು ಪ್ರಕಟಣೆಯನ್ನು ಹೊರಡಿಸಿದ್ದಾರೆ.