ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belgavi) ಮೂರು ವರ್ಷಗಳ ಬಳಿಕ ನಡೆಯುತ್ತಿರುವ ಅದ್ಧೂರಿ ಕನ್ನಡ ರಾಜ್ಯೋತ್ಸವದಲ್ಲಿ (Kannada Rajyotsava) ಭಾಗಿಯಾಗುವ 50 ಸಾವಿರ ಜನರಿಗೆ ಹುಕ್ಕೇರಿ ಹಿರೇಮಠ ವತಿಯಿಂದ 1 ಲಕ್ಷ ಹೋಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ (Chandrasekhara Shivacharya Swamiji) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವಕ್ಕೆ ಬರುವ ಕನ್ನಡಿಗರಿಗೆ ಒಂದು ಲಕ್ಷ ಹೋಳಿಗೆ (Holige) ದಾಸೋಹ ಮಾಡಲಾಗುತ್ತಿದೆ. ರಾಜ್ಯೋತ್ಸವದಂದು ಇಡೀ ರಾಜ್ಯವೇ ಬೆಳಗಾವಿ ಕಡೆಗೆ ತಿರುಗಿ ನೋಡುತ್ತಿರುತ್ತದೆ. ಅಷ್ಟೊಂದು ವೈಭವೋಪೇತ ರಾಜ್ಯೋತ್ಸವಕ್ಕೆ ಬೆಳಗಾವಿ ಸಾಕ್ಷಿಯಾಗುತ್ತದೆ. ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ 50 ಸಾವಿರ ಕನ್ನಡಿಗರಿಗೆ ಹೋಳಿಗೆ ಊಟ ವ್ಯವಸ್ಥೆ ಮಾಡಿದ್ದೇವೆ. ಒಬ್ಬರಿಗೆ ತಲಾ ಎರಡು ಹೋಳಿಗೆಯಂತೆ ಒಂದು ಲಕ್ಷ ಹೋಳಿಗೆ ಸಿದ್ಧಪಡಿಸುತ್ತೇವೆ ಎಂದರು.
ಹೋಳಿಗೆ ಜೊತೆಗೆ ಊಟದಲ್ಲಿ ಬದನೆಕಾಯಿ ಪಲ್ಯ, ಅನ್ನ-ಸಾಂಬಾರು ಇರಲಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರು ಊಟ ಸಿದ್ಧಪಡಿಸಲಿದ್ದಾರೆ. 150 ಜನ ಹೆಣ್ಣುಮಕ್ಕಳಿಂದ ಹೋಳಿಗೆ, 50 ಪುರುಷರಿಂದ ಅನ್ನ-ಸಾಂಬರು, ಕಾಯಿಪಲ್ಯ ತಯಾರಿಸಲಾಗುತ್ತದೆ. ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಹುಕ್ಕೇರಿ ಹಿರೇಮಠಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್
ಹಿರಿಯ ನಟ ಸಾಯಿಕುಮಾರ್ (Sai Kumar) , ಉಸ್ತುವಾರಿ ಸಚಿವ ಗೋವಿಂದ ಕಾರಜೋಳರಿಂದ (Govind Karjol) ಹೋಳಿಗೆ ದಾಸೋಹಕ್ಕೆ ಚಾಲನೆ ಕೊಡುತ್ತಾರೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಯಿಂದಲೇ ಹೋಳಿಗೆ ದಾಸೋಹ ಪ್ರಾರಂಭ ಆಗಲಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಬೆಳಗಾವಿಯಲ್ಲಿ ನಡೆಯುತ್ತದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು. ಹೆಚ್ಚಿನ ಅನುದಾನ ಬಿಡುಗಡೆ ಆದರೆ ರಾಜ್ಯೋತ್ಸವ ಆಚರಣೆಗೆ ಉತ್ಸಾಹವೂ ವೃದ್ಧಿ ಆಗುತ್ತದೆ ಎಂದರು.
50 ಸಾವಿರ ಜನರಿಗೆ ಸಿದ್ಧವಾಗಲಿರುವ ಊಟಕ್ಕೆ ಎಲ್ಲ ಭಾಗದಿಂದ ದಿನಸಿ ಬಳಕೆ ಮಾಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬೆಲ್ಲ, ಗದಗ ಜಿಲ್ಲೆಯ ಕಡಲೆ, ಬೆಳಗಾವಿ ಜಿಲ್ಲೆಯ ಅಡುಗೆ ಎಣ್ಣೆ, ಗುಜರಾತ್ ರಾಜ್ಯದ ಗೋಧಿ ಹಿಟ್ಟು, ದಾವಣಗೆರೆಯ ಅಕ್ಕಿ, ಶಿವಮೊಗ್ಗದಿಂದ 50 ಸಾವಿರಕ್ಕೂ ಅಧಿಕ ಅಡಿಕೆ ಎಲೆಯನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗುಜರಾತ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ