ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.
ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ (Prize)ಕೊಡುವುದಾಗಿ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ. ಇದನ್ನೂ ಓದಿ:ಎಲೆಕ್ಷನ್ ರಿಸಲ್ಟ್ ದಿನವೇ ರಾಘವ್ ಚಡ್ಡಾ- ಪರಿಣಿತಿ ಚೋಪ್ರಾ ಎಂಗೇಜ್ಮೆಂಟ್
ಕಾಂಗ್ರೆಸ್ ಜೊತೆಗೆ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (DYFI) ಕೂಡ ವಿರೋಧವನ್ನು ವ್ಯಕ್ತ ಪಡಿಸಿದ್ದು, ಸಂಘ ಪರಿವಾರದವರು ಸೇರಿಕೊಂಡು, ಒಂದು ಸಮುದಾಯದ ವಿರುದ್ಧ ಕೆಟ್ಟ ಅಭಿಪ್ರಾಯ ಹುಟ್ಟುವಂತೆ ಈ ಸಿನಿಮಾವನ್ನು ತೋರಿಸಲು ಹೊರಟಿದ್ದಾರೆ. ಇದು ಕೇರಳ ರಾಜ್ಯಕ್ಕೂ ಅಪಮಾನ ಮಾಡುವಂತಹ ಚಿತ್ರ. ಹಾಗಾಗಿ ಕೂಡಲೇ ಬಿಡುಗಡೆಯನ್ನು ತಡೆಯಬೇಕು ಎಂದು ಮನವಿ ಮಾಡಿವೆ.
ನಾಲ್ಕು ದಿನಗಳ ಹಿಂದೆಯಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಲವ್ ಜಿಹಾದ್ ಸುತ್ತಾ ಹೆಣೆದಿರುವ ಕಥಾ ಹಂದರ ಬಿಜೆಪಿಗೆ ಚುನಾವಣೆ ಅಸ್ತ್ರವಾಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಮೇ 05 ರಂದು ದೇಶದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಹಲವು ಕಡೆ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ.