ಅದಾ ಶರ್ಮಾ (Adah Sharma) ಮುಖ್ಯಭೂಮಿಕೆಯ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ರಿಲೀಸ್ ಆಗಿ ನಾಳೆಗೆ ಒಂದು ವಾರ ಪೂರ್ಣಗೊಳ್ಳಲಿದೆ. ಒಂದು ವಾರದಲ್ಲಿ ಸಿನಿಮಾ ಏನೆಲ್ಲ ಬೆಳವಣಿಗೆ ಕಂಡಿದೆ. ರಿಲೀಸ್ ಆಗಿ ಕೇವಲ 5 ದಿನಕ್ಕೆ 50 ಕೋಟಿ ರೂಪಾಯಿ ಕಲೆಕ್ಷನ್ (Collection) ಮಾಡಿದೆ. ಜೊತೆಗೆ ಎರಡು ರಾಜ್ಯಗಳಲ್ಲಿ ನಿಷೇಧ ಹಾಗೂ ಮೂರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಕೂಡ ಪಡೆದುಕೊಂಡಿದೆ. ಹಲವಾರು ರಾಜ್ಯಗಳಲ್ಲಿ ಹಿಂದೂಪರ ಸಂಘಟನೆಗಳು ಉಚಿತ ಪ್ರದರ್ಶನವನ್ನು ಆಯೋಜನೆಗೊಳಿಸಿವೆ.
ಎರಡು ರಾಜ್ಯಗಳಲ್ಲಿ ನಿಷೇಧ ಹೇರಿದ್ದರೂ, ಸ್ವತಃ ಕೇರಳದಲ್ಲೇ ಸಿನಿಮಾ ಪ್ರದರ್ಶನಕ್ಕೆ ನಾನಾ ಅಡತಡೆಗಳನ್ನು ಒಡ್ಡಿದ್ದರೂ ಅದು ಹೇಗೆ ಐದೇ ದಿನಕ್ಕೆ ಐವತ್ತು ಕೋಟಿ ಕಲೆಕ್ಷನ್ ಆಗೋಕೆ ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಮಾಡಿದ್ದಾರೆ. ಆದರೆ, ಬಾಲಿವುಡ್ ಸಿನಿ ಪಂಡಿತರ ಲೆಕ್ಕಾಚಾರವೇ ಬೇರೆ ಇದೆ. ಮೂರು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆ ಮಾಡಿರುವುದರಿಂದ ಐವತ್ತು ಕೋಟಿ ರೂಪಾಯಿ ಗಳಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:‘ಹಾಸಿಗೆಯಲ್ಲಿ ರೋಷನ್ ಇರಬೇಕು’ ಡೈಲಾಗ್ ಬಿಟ್ಟ ನಿಹಾರಿಕಾ ವಿರುದ್ಧ ಕಿಡಿಕಾರಿದ ನೆಟ್ಟಿಗರು
ಸಿನಿಮಾ ಮೊದಲ ದಿನ ಸಾಧಾರಣ ಓಪನಿಂಗ್ ಪಡೆದುಕೊಂಡಿದ್ದರೂ, ಮುಂದಿನ ದಿನಗಳಲ್ಲಿ ಅಚ್ಚರಿ ಎನ್ನುವಂತೆ ದುಡ್ಡು ಬಾಕ್ಸ್ ಆಫೀಸಿಗೆ ಹರಿದು ಬಂದಿದೆ. ಶುಕ್ರವಾರ 8.03 ಕೋಟಿ ರೂ. ಶನಿವಾರ 11.22 ಕೋಟಿ ರೂ. ಭಾನುವಾರ 16 ಕೋಟಿ ರೂ. ಸೋಮವಾರ 10.07 ಕೋಟಿ ರೂ. ಮಂಗಳವಾರ 11.14 ಕೋಟಿ ರೂ. ಸೇರಿ ಭಾರತದಲ್ಲೇ ಐದು ದಿನಕ್ಕೆ 56.86 ಕೋಟಿ ಗಳಿಕೆ ಮಾಡಿದೆ.
ಈ ಖುಷಿಯ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಚಿತ್ರತಂಡಕ್ಕೆ ಶಾಕ್ ಕೂಡ ನೀಡಿದೆ. ಪಶ್ಚಿಮ ಬಂಗಾಳ (West Bengal) ನಿಷೇಧಿಸಿರುವುದು ಹಾಗೂ ತಮಿಳುನಾಡಿನಲ್ಲಿ (Tamil Nadu) ನಿಷೇಧಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠವು ಈ ವಿಷಯವನ್ನು ಬುಧವಾರ ತುರ್ತು ಪಟ್ಟಿಗೆ ಸೇರಿಸಿದ ನಂತರ ಮೇ 12 ರಂದು ವಿಚಾರಣೆಗೆ ಮುಂದೂಡಿದೆ. ಅಲ್ಲದೆ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸೋಮವಾರ ಒಪ್ಪಿಕೊಂಡಿದೆ.