ಹಾಸನ: ಬೆಂಗಳೂರಿನಲ್ಲಿ ರಿಯಲ್ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿಯ ಕಮರವಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ
ಲಿಂಗರಾಜು(43) ಕೊಲೆಯಾದ ವ್ಯಕ್ತಿ. ಮೃತ ಲಿಂಗರಾಜು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಕೊರೊನಾ ಲಾಕ್ಡೌನ್ ನಂತರ ತಮ್ಮ ಸ್ವಗ್ರಾಮ ಕಮರವಳ್ಳಿಗೆ ಬಂದು ತೋಟದ ಮನೆಯಲ್ಲಿ ವಾಸವಾಗಿದ್ದರು.
ನಿನ್ನೆ ರಾತ್ರಿ ಕಾರ್ ಮತ್ತು ಬೈಕ್ನಲ್ಲಿ ಬಂದ ಸುಮಾರು ಎಂಟು ಜನ ದುಷ್ಕರ್ಮಿಗಳು ಹ್ಯಾಮರ್ ಮತ್ತು ಮಚ್ಚಿನಿಂದ ಕೈಕಾಲು, ತಲೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ವೇಳೆ ಬಿಡಿಸಲು ಬಂದ ಸಂಬಂಧಿಕರ ಮೇಲೂ ಹಲ್ಲೆ ನಡೆಸಲಾಗಿದೆ. ಅಷ್ಟೇ ಅಲ್ಲದೆ ಸಾಕ್ಷಿ ನಾಶಪಡಿಸಲು ದುಷ್ಕರ್ಮಿಗಳು ಸಿಸಿಟಿವಿಯ ಡಿವಿಆರ್ ಹೊತ್ತೊಯ್ದಿದ್ದಾರೆ. ಘಟನೆ ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.