ಜೈಪುರ: ಹ್ಯಾಂಡ್ ಬ್ರೇಕ್ ಹಾಕದ ಪರಿಣಾಮ ಕಾರೊಂದು ಕಾಲುವೆಗೆ ಮುಳುಗಿ ನಾಲ್ವರು ಮೃತಪಟ್ಟಿರುವ ಘಟನೆ ಬುಧವಾರ ರಾಜಸ್ಥಾನ ಹನುಮನ್ಗರ್ ಜಿಲ್ಲೆಯಲ್ಲಿ ನಡೆದಿದೆ.
ಕಾರಿನಲ್ಲಿ ದಂಪತಿ ಸೇರಿದಂತೆ ಅವರ ಮಗಳು ಮತ್ತು ಸಂಬಂಧಿಕರು ಸಿಕಾರ್ನಿಂದ ರಾವತ್ಸರ್ಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರ ಕುಟುಂಬ ಸ್ನೇಹಿತ ರಮೇಶ್ ಕುಮಾರ್ ಎಂಬವರು ಕಾರು ಚಲಾಯಿಸುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದಾರೆ. ಆದರೆ ಹ್ಯಾಂಡ್ ಬ್ರೇಕ್ ಹಾಕುವುದನ್ನು ಮರೆತು ಕಾರನ್ನು ಹಾಗೇ ಬಿಟ್ಟು ಹೋದ ಪರಿಣಾಮ ಕಾರು ಉರುಳಿ ಇಂದಿರಾಗಾಂಧಿ ಕಾಲುವೆಗೆ ಬಿದ್ದಿದೆ ಎಂದು ಹುಮನ್ಗರ್ ಪಟ್ಟಣದ ಪೊಲೀಸ್ ಠಾಣೆ ಇನ್ಚಾರ್ಜ್ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರನ್ನು ವಿನೋದ್ ಕುಮಾರ್(45), ಪತ್ನಿ ರೇಣು(42) ಹಾಗೂ 15 ವರ್ಷದ ಮಗಳು ಮತ್ತು ಅವರ ಸಂಬಂಧಿಕರಾದ ಸುನೀತ ಭತಿ(40) ಎಂದು ಪೊಲೀಸರು ಗುರುತಿಸಿದ್ದಾರೆ. ಇದೀಗ ಮೀನು ಹಿಡಿಯುವವರ ಸಹಾಯದಿಂದ ಮೃತಪಟ್ಟವರ ದೇಹವನ್ನು ಕಾಲುವೆಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.