ಬೆಂಗಳೂರು: ಹೊಸ ವರ್ಷದ ಜೊತೆ ಜೊತೆ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭ ಆಗ್ತಿದೆ. ಬರೋಬ್ಬರಿ 8 ತಿಂಗಳ ಬಳಿಕ ನಾಳೆಯಿಂದ ಶಾಲೆ ಶುರುವಾಗಲಿದೆ. ನಾಳೆ 10ನೇ ತರಗತಿ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಲಿವೆ. ಇದರ ಜೊತೆಗೆ 6ರಿಂದ 9ನೇ ತರಗತಿವರೆಗೆ ವಿದ್ಯಾಗಮ ಕ್ಲಾಸ್ ಕೂಡ ನಡೆಯಲಿದೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ತಜ್ಞರ ಸಮ್ಮತಿ ಮೇರೆಗೆ ಶಿಕ್ಷಣ ಇಲಾಖೆ ಸರ್ವ ಸನ್ನದ್ಧವಾಗಿದೆ. ಭಯ ಬೇಡ, ಬ್ರಿಟನ್ ಔಷಧಕ್ಕೂ ಕೋವಿಡ್ ಲಸಿಕೆಯೇ ಸಾಕು. ಶೀಘ್ರವೇ ಲಸಿಕೆಯೂ ಸಿಗಲಿದೆ. ಪೋಷಕರು ನಿರಾತಂಕವಾಗಿ ಮಕ್ಕಳನ್ನ ಶಾಲೆಗೆ ಕಳುಹಿಸಿ. 15 ದಿನಗಳ ನಂತರ ಉಳಿದ ತರಗತಿ ಪ್ರಾರಂಭಕ್ಕೆ ನಿರ್ಧಾರ ಮಾಡ್ತೀವಿ ಅಂತ ತಿಳಿಸಿದ್ರು. ಅಲ್ಲದೆ, ನಾಳೆ ಪಾಠ ಮಾಡಬೇಡಿ. 6 ತಿಂಗಳ ಭಾವನೆ ವ್ಯಕ್ತಪಡಿಸಲು ಮಕ್ಕಳಿಗೆ ಅವಕಾಶ ಕೊಡಿ, ಕೊರೊನಾ ವೈರಸ್ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿ ಅಂತ ಶಿಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.
ತರಗತಿಗೆ ಹಾಜರಾಗೋದು ಕಡ್ಡಾಯ ಅಲ್ಲ. ಪೋಷಕರ ಅನುಮತಿ ಪತ್ರವನ್ನು ವಿದ್ಯಾರ್ಥಿಗಳು ತರಲೇಬೇಕಿದೆ. ರಾಜ್ಯಾದ್ಯಂತ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಕ್ಲಾಸ್ ಅಟೆಂಡ್ ಆಗೋ ಮಕ್ಕಳು ಮನೆಯಿಂದಲೇ ಊಟ, ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಈ ಮಧ್ಯೆ ಮೇ 4ರಿಂದ ಜೂನ್ 10ರವರೆಗೆ ಸಿಬಿಎಸ್ಇ ಪರೀಕ್ಷೆ ನಡೆಯಲಿದೆ. ಜುಲೈ 15ಕ್ಕೆ ಫಲಿತಾಂಶ ಪ್ರಕಟವಾಗಲಿದೆ.