ಬೆಂಗಳೂರು: ಕನ್ನಡದ ಎದೆಗಾರಿಕೆಯ ನಿರ್ದೇಶಕಿ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿದ್ದ ಸುಮನಾ ಕಿತ್ತೂರ್ ಕೊರೊನಾ ಕಾಲದಲ್ಲಿ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.
ಸುಮನಾ ಕಿತ್ತೂರು ಕೆಲ ಸಮಯದಿಂದ ಪಾಂಡಿಚೇರಿಯಲ್ಲಿ ನೆಲೆಸಿದ್ದು ಅಲ್ಲಿಯೇ ಶಿವಮೊಗ್ಗ ಮೂಲದ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ. ಈಗ ಸುಮನಾ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೆಳೆಯ ಶ್ರೀನಿವಾಸ್ ಅವರನ್ನು ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ದತಿಯ ಮೂಲಕ ಕುಪ್ಪಳ್ಳಿಯಲ್ಲೇ ವಿವಾಹವಾಗಬೇಕೆಂದು ಸುಮನಾ ಬಯಸಿದ್ದರು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಯಾದ ಕಾರಣ ಪಾಂಡಿಚೇರಿಯಲ್ಲಿ ಮದುವೆಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸುಮನಾ ಅವರು, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸರಳವಾಗಿ ನಮ್ಮ ವಿವಾಹ ನಡೆದಿದೆ. ಏಪ್ರಿಲ್ ನಲ್ಲಿ ಲಾಕ್ಡೌನ್ ತೆರವಾದ ಬಳಿಕ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯ ಪದ್ದತಿಯ ಪ್ರಕಾರ ವಿವಾಹವಾಗಬೇಕೆಂದು ಬಯಸಿದ್ದೆವು. ಆದರೆ ಈ ಆಸೆ ಈ ಸಮಯದಲ್ಲಿ ಕಷ್ಟ ಸಾಧ್ಯವಾಗಿದ್ದರಿಂದ ಪಾಂಡಿಚೇರಿಯಲ್ಲಿ ಸರಳವಾಗಿ ನಮ್ಮ ವಿವಾಹ ನಡೆಯಿತು ಎಂದು ತಿಳಿಸಿದ್ದಾರೆ.
ಸುಮನಾ ಅವರ ಗೆಳೆಯ ಶ್ರೀನಿವಾಸ್ ಅವರ ಕುಟುಂಬ ಕೆಲ ವರ್ಷಗಳಿಂದ ಪಾಂಡಿಚೇರಿಯಲ್ಲಿ ನೆಲೆಸಿದೆ. ಮುಂದೆ ಕರ್ನಾಟಕದಲ್ಲಿ ನೆಲೆಸುವ ನಿರ್ಧಾರವನ್ನು ದಂಪತಿ ಮಾಡಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರಿನಲ್ಲಿ ಜನಿಸಿದ ಇವರು ಕಳ್ಳರ ಸಂತೆ, ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದಾರೆ. ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ.