– 7 ದಿನ ಮನೆಯಿಂದ ಹೊರ ಬರುವಂತಿಲ್ಲ
ಧಾರವಾಡ: ಕೊರೊನಾ ಎರಡನೇ ಅಲೆ ಜೋರಾಗಿ ಹಬ್ಬುತ್ತಿದ್ದಂತೆ ಜಿಲ್ಲೆಯ ಜನ ತಾವಾಗಿಯೇ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಸಹಿತ ಹೊರ ಜಿಲ್ಲೆಯಿಂದ ಆಗಮಿಸುವವರು ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬಂದರೆ ಮಾತ್ರ ಹಳ್ಳಿಗಳಿಗೆ ಪ್ರವೇಶ. ಇಲ್ಲದೆ ಇದ್ದರೆ ಹಳ್ಳಿ ಪ್ರವೇಶಕ್ಕೆ ಅನುಮತಿ ನೀಡದೇ ಇರಲು ನಿರ್ಧರಿಸಿದ್ದಾರೆ.
ಕಳೆದ ವರ್ಷ ಕೊರೊನಾ ಮೊದಲ ಅಲೆ ಬಂದಾಗ ಲಾಕ್ಡೌನ್ ಆಗುತ್ತಿದ್ದಂತೆ ಹಳ್ಳಿ ಹಳ್ಳಿಗಳನ್ನೆಲ್ಲಾ ಲಾಕ್ ಮಾಡಲಾಗಿತ್ತು. ಆದರೆ ಎರಡನೇ ಅಲೆ ಜೋರಾಗಿದ್ದರೂ ಬಹುತೇಕ ಹಳ್ಳಿಗಳು ಇನ್ನೂ ಲಾಕ್ ಆಗಿಲ್ಲ. ಆದರೆ ಈ ಬಾರಿ ಸರ್ಕಾರ ಲಾಕ್ಡೌನ್ ಮಾಡಿದರು ಕೂಡ ಕೆಲವು ಕ್ರಮಗಳು ಸಡಿಲಿಕೆಯಲ್ಲಿದೆ. ಹಾಗಾಗಿ ಹಳ್ಳಿಗರು ಸಹ ಉದಾಸೀನ ವಹಿಸೋಕೆ ಆರಂಭ ಮಾಡಿ ಬಿಟ್ಟಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಹಳ್ಳಿ ಹಳ್ಳಿಯಲ್ಲೂ ಜನ ಕೊರೊನಾ ನಿಯಂತ್ರಣಕ್ಕೆ ತಮಗೆ ತಾವೇ ಟಫ್ ರೂಲ್ಸ್ಗಳನ್ನು ಹಾಕಿಕೊಳ್ಳಲು ಮುಂದಾಗಿದ್ದಾರೆ.
ಧಾರವಾಡ ಸಮೀಪದ ಹೆಬ್ಬಳ್ಳಿ ಗ್ರಾಮ ಸುಮಾರು 18 ಸಾವಿರ ಜನಸಂಖ್ಯೆವುಳ್ಳ ದೊಡ್ಡ ಗ್ರಾಮವಾಗಿದ್ದು, ಹೆಬ್ಬಳ್ಳಿಯಲ್ಲಿ ಈಗಾಗಲೇ 8 ಜನರಿಗೆ ಕೊರೊನಾ ಪಾಸಿಟಿವ್ ಆಗಿದೆ. ಹೀಗಾಗಿ ಇದು ಬೆಳೆಯಬಾರದು. ಈ ಚೈನ್ ಲಿಂಕ್ ಕಟ್ ಮಾಡಬೇಕು ಎಂದುಕೊಂಡು ಹೆಬ್ಬಳ್ಳಿ ಗ್ರಾಮ ಪಂಚಾಯತ್ನವರು ಮತ್ತು ಸಾರ್ವಜನಿಕರು ಟಫ್ ರೂಲ್ಸ್ ಹಾಕಿಕೊಂಡಿದ್ದಾರೆ.
ಈ ಪ್ರಕಾರ ಬೆಂಗಳೂರಿನಿಂದ ಬರುವವರಿಗೆ ನೇರವಾಗಿ ಗ್ರಾಮಕ್ಕೆ ಪ್ರವೇಶ ಇಲ್ಲ. ಊರಿಗೆ ಬರುವುದಾದರೆ ಮೊದಲು ಆಸ್ಪತ್ರೆಗೆ ಹೋಗಿ ಕೋವಿಡ್ ಟೆಸ್ಟ್ ಮಾಡಿಸಬೇಕು. ನೆಗಟಿವ್ ಬಂದರೆ ಮಾತ್ರ ಊರೊಳಗೆ ಬರಬೇಕು ಎನ್ನುವ ರೂಲ್ಸ್ ಮಾಡಿದ್ದಾರೆ. ಅದಲ್ಲದೆ ಬೇರೆ ಯಾವುದೇ ಊರಿನಿಂದ ಬಂದರೂ ಏಳು ದಿನ ಮನೆಬಿಟ್ಟು ಹೊರಗೆ ಬರದೇ ಕ್ವಾರಂಟೈನ್ ಆಗಬೇಕು ಎಂದು ಎಲ್ಲರಿಗೂ ತಿಳಿ ಹೇಳಿದ್ದಾರೆ.