-ಕಾರ್ ಗೆ ಬೆಂಕಿ ಹಾಕಿ ಆರೋಪಿ ಪರಾರಿ
-ಮದ್ಯದ ಬಾಟಲ್ನಲ್ಲಿ ಪೆಟ್ರೋಲ್ ತಂದಿದ್ದ
ಹೈದರಾಬಾದ್: ಕಾರಿನಲ್ಲಿ ಮೂವರನ್ನು ಲಾಕ್ ಮಾಡಿ ಬೆಂಕಿ ಹಚ್ಚಿ ಮೂವರನ್ನು ಮೂವರನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಕಾರ್ ಧಗ ಧಗಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವಿಜಯವಾಡದ ಪಟಮಾಟ್ ರಸ್ತೆಯ ಬದಿಯಲ್ಲಿ ಘಟನೆ ನಡೆದಿದ್ದು, ಮೂವರನ್ನು ಕಾರ್ ನಲ್ಲಿ ಲಾಕ್ ಮಾಡಿದ ವೇಣುಗೋಪಾಲ್ ರೆಡ್ಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಕಾರ್ ನಿಂದ ಹೊರ ಬರಲಾರದೇ ಮೂವರು ಸಜೀವ ದಹನವಾಗಿದ್ದಾರೆ. ಗಂಗಾಧರ ರೆಡ್ಡಿ, ನಾಗವಲ್ಲಿ ಮತ್ತು ಕೃಷ್ಣಾ ರೆಡ್ಡಿ ಮೃತ ದುರ್ದೈವಿಗಳು.
ವೇಣುಗೋಪಾಲ್ ಮತ್ತು ಗಂಗಾಧರ್ ಇಬ್ಬರು ಜೊತೆಯಾಗಿ ವ್ಯವಹಾರ ಮಾಡಿಕೊಂಡಿದ್ದರು. ಇಬ್ಬರು ಪಾಲುದಾರಿಕೆಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟ ಮಾಡುತ್ತಿದ್ದರು. ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಇಬ್ಬರು ಬೇರೆ ಬೇರೆಯಾಗಿದ್ದರು.
ವೇಣುಗೋಪಾಲ್ ಹಲವು ಬಾರಿ ಗಂಗಾಧರ್ ನನ್ನ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಗಂಗಾಧರ್ ಆತನಿಂದ ಅಂತರ ಕಾಯ್ದುಕೊಂಡು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸೋಮವಾರ ಗಂಗಾಧರ್, ಪತ್ನಿ ನಾಗವಲ್ಲಿ ಮತ್ತು ಗೆಳೆಯ ಕೃಷ್ಣಾ ರೆಡ್ಡಿ ಜೊತೆ ಸೇರಿ ವೇಣುಗೋಪಾಲ್ ನನ್ನು ಭೇಟಿಯಾಗಲು ತೆರಳಿದ್ದಾರೆ. ಸಂಜೆ ಸುಮಾರು 4.45ಕ್ಕೆ ನಾಲ್ವರು ಕಾರಿನಲ್ಲಿ ಕುಳಿತು ಮಾತನಾಡಲು ಆರಂಭಿಸಿದ್ದಾರೆ. ಕೆಲ ಸಮಯದ ಬಳಿಕ ಸಿಗರೇಟ್ ಸೇದಬೇಕೆಂದು ವೇಣುಗೋಪಾಲ್ ಕಾರ್ ನಿಂದ ಹೊರಗೆ ಬಂದಿದ್ದನೆ. ಆಚೆ ಬರುತ್ತಿದ್ದಂತೆ ಕಾರ್ ಲಾಕ್ ಮಾಡಿ ಮೊದಲೇ ಮದ್ಯದ ಬಾಟಲ್ ನಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಇಬ್ಬರ ಮಧ್ಯೆ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿರುವ ಸಾಧ್ಯತೆಗಳಿವೆ. ಸಂಪರ್ಕಕ್ಕೆ ಸಿಗದ ಗಂಗಾಧರ್ ಸಿಕ್ಕಾಗ ವೇಣುಗೋಪಾಲ್ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ವಿಜಯವಾಡ ಡೆಪ್ಯೂಟಿ ಪೊಲೀಸ್ ಕಮೀಷನರ್ ಹರ್ಷವರ್ಧನ್ ಹೇಳಿದ್ದಾರೆ.