ಮಡಿಕೇರಿ: ಒತ್ತುವರಿಯಾಗಿರುವ ಮಡಿಕೇರಿ ನಗರದ ರಾಜರ ಗದ್ದುಗೆ ಜಾಗದ ಸರ್ವೆ ನಡೆಸುವಂತೆ ಹೈಕೋರ್ಟ್ ಮಡಿಕೇರಿ ತಹಶೀಲ್ದಾರರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ನಡೆಯಿತು.
ಸರ್ವೆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಯಿಸೀನ್, ಬಷೀರ್ ಹಾಗೂ ಮನ್ಸೂರ್ ಅವರು ಮೊದಲು ಗದ್ದುಗೆಯ ಗಡಿಯನ್ನು ಸರ್ವೆ ಮೂಲಕ ಗುರುತಿಸುವ ಕೆಲಸ ಮಾಡಬೇಕು. ಹೀಗಾದಾಗ ಮಾತ್ರ ಒತ್ತುವರಿ ವಿಚಾರ ಬೆಳಕಿಗೆ ಬರಲಿದೆ ಎಂದು ತಹಶೀಲ್ದಾರ್ ಮಹೇಶ್ ಅವರಿಗೆ ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಈಗ ಗಡಿ ಗುರುತಿನ ಸರ್ವೆ ನಡೆಸಲಾಗುತ್ತಿದೆ. ಬಳಿಕ ಕಂದಾಯ ಇಲಾಖೆಯ ನಕ್ಷೆಯಲ್ಲಿ ಸರ್ವೇ ಮಾಡಲಾದ ಪ್ರದೇಶವನ್ನು ಹೊಂದಿಸಲಾಗುತ್ತದೆ. ಈ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ:ಪೈಲೆಟ್ ಆಗುವ ಕನಸು ಹೊತ್ತಿದ್ದ ಕೊಡಗಿನ ಯುವಕ ಗುಜರಾತಿನಲ್ಲಿ ಆತ್ಮಹತ್ಯೆಗೆ ಶರಣು
ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಮಹೇಶ್, ಹೈಕೋರ್ಟ್ ನಿರ್ದೇಶನದಂತೆ 6 ವಾರಗಳ ಒಳಗೆ ಸರ್ವೆ ನಡೆಸಿ ವರದಿ ನೀಡಬೇಕಿತ್ತು. ಆದರೆ ನಗರ ಸಭೆ ಚುನಾವಣಾ ನೀತಿ ಸಂಹಿತೆ, ಕೊರೊನಾ ಮತ್ತಿತ್ತರ ಕಾರಣಗಳಿಂದ ಸರ್ವೇ ಕಾರ್ಯ ನಡೆದಿರಲಿಲ್ಲ. ರಾಜ್ಯ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಸರ್ವೆ ನಂಬರ್ 30/1ರ 19.88 ಎಕರೆ ಪ್ರದೇಶದ ಗಡಿ ಗುರುತಿಸಿ ವಾಸ್ತವಾಂಶದ ವರದಿಯನ್ನು ನ್ಯಾಯಾಲಯಕ್ಕೆ ನೀಡಲಾಗುತ್ತದೆ. ನ್ಯಾಯಾಲಯದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ:ದುಬಾರೆ ಆನೆ ಶಿಬಿರದಿಂದ ‘ಕುಶ’ ಬಂಧ ಮುಕ್ತ- ಸಚಿವ ಅರವಿಂದ ಲಿಂಬಾವಳಿ
ಸ್ಥಳದಲ್ಲಿದ್ದ ಕೊಡಗು ಜಿಲ್ಲಾ ವೀರಶೈವ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಸಾಂಬಶಿವ ಮಾತನಾಡಿ, ಹೈಕೋರ್ಟ್ ನಿರ್ದೇಶನದಂತೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ದಾಖಲೆಗಳ ಪ್ರಕಾರ 19.88 ಎಕರೆ ಪ್ರದೇಶ ಗದ್ದುಗೆಗೆ ಸೇರಿದ್ದಾಗಿದೆ. ಆದರೆ ಇದರಲ್ಲಿ ಎಷ್ಟು ಒತ್ತುವರಿಯಾಗಿ ಅಲ್ಲಿ ಎಷ್ಟು ಜನರು ನೆಲೆಸಿದ್ದಾರೆ ಎಂಬುದು ಸರ್ವೆಯಿಂದ ಗೊತ್ತಾಗಲಿದೆ. ಹೈಕೋರ್ಟ್ ಆದೇಶದ ಪ್ರಕಾರ ಒತ್ತುವರಿದಾರರಿಗೆ ಪುನರ್ ವಸತಿ ಕಲ್ಪಿಸಬೇಕು, ಸ್ಮಾರಕಕ್ಕೆ ತೊಂದರೆ ಆಗದ ರೀತಿಯಲ್ಲಿ ಸಂರಕ್ಷಣೆಯೂ ಆಗಬೇಕು. ಇದು ಅರ್ಜಿದಾರರು ಮತ್ತು ವೀರಶೈವ ಮಹಾ ಸಭಾದ ಒತ್ತಾಸೆಯೂ ಅಗಿದೆ ಎಂದರು.