ಹಾಸನ: ಕಳೆದ ಐದು ವರ್ಷಗಳಿಂದ ಹೇಮಾವತಿ ಸಕ್ಕರೆ ಕಾಖಾನೆ ಆರಂಭಿಸದ ಹಿನ್ನೆಲೆ ಜಿಲ್ಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, 2 ಲಕ್ಷ ಟನ್ಗೂ ಅಧಿಕ ಕಬ್ಬು ಒಣಗುತ್ತಿದೆ ಎಂದು ರೈತು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಶ್ರೀನಿವಾಸಪುರದಲ್ಲಿರುವ ಹೇಮಾವತಿ ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡದಿರುವುದನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹೇಮಾವತಿ ಸಕ್ಕರೆ ಕಾರ್ಖಾನೆ ಬಳಿ ಗೋಪಾಲಸ್ವಾಮಿ ನೇತೃತ್ವದಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್ನಲ್ಲಿ ಜಮಾಯಿಸಿದ ಸಾವಿರಾರು ರೈತರು ಸರ್ಕಾರ ಮತ್ತು ಸ್ಥಳೀಯ ಶಾಸಕ ಬಾಲಕೃಷ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರಿಗೆ ಗುತ್ತಿಗೆ ನೀಡಲಾಗಿದೆ. ಐದು ವರ್ಷದಿಂದ ಕಾರ್ಖಾನೆಯನ್ನು ಆರಂಭ ಮಾಡದ ಪರಿಣಾಮ ಎರಡು ಲಕ್ಷ ಟನ್ಗೂ ಹೆಚ್ಚು ಕಬ್ಬು ಗದ್ದೆಯಲ್ಲೇ ಒಣಗುತ್ತಿದೆ. ಅಷ್ಟೆ ಅಲ್ಲದೆ ಕಾರ್ಖಾನೆ ವಹಿಸಿಕೊಂಡವರು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹಣ ಪಾವತಿಸಬೇಕಿದ್ದು, ಅದನ್ನೂ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಅವ್ಯವಸ್ಥೆಗೆ ಸ್ಥಳೀಯ ಶಾಸಕ ಬಾಲಕೃಷ್ಣ ಸಹ ಕಾರಣರಾಗಿದ್ದಾರೆ ಎಂದು ಎಂಎಲ್ಸಿ ಗೋಪಾಲಸ್ವಾಮಿ ವಾಗ್ದಾಳಿ ನಡೆಸಿದರು. ಚನ್ನರಾಯಪಟ್ಟಣದಲ್ಲಿ ಪಾದಯಾತ್ರೆ ಮಾಡುತ್ತ ತಹಶಿಲ್ದಾರ್ ಕಚೇರಿಗೆ ತೆರಳಿ ಎಂಎಲ್ಸಿ ಗೋಪಾಲಸ್ವಾಮಿ ಅವರು ತಹಶಿಲ್ದಾರ್ ಮಾರುತಿ ಪ್ರಸನ್ನ ಅವರಿಗೆ ಮನವಿ ಪತ್ರ ಸಲ್ಲಿಸಿ, ತಕ್ಷಣ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.