– ಸರಳ ದಸರೆಗೆ 15 ಕೋಟಿ ಯಾಕೆ?
– ಚರ್ಚೆಗೆ ಗ್ರಾಸವಾಗಿದೆ ಸರ್ಕಾರದ ನಡೆ
ಮೈಸೂರು: ಕೊರೊನಾ ಭೀತಿಯಲ್ಲಿ ಈ ಬಾರಿ ಅತಿ ಸರಳ ದಸರಾ ನಡೆಸಲು ಸರ್ಕಾರ ಮುಂದಾಗಿದೆ. ಅತಿ ಸರಳ ದಸರಾ ಅಂದರೆ ದಸರಾ ವೆಚ್ಚವೂ ಅತಿ ಕಡಿಮೆ ಆಗಬೇಕು. ಆದರೆ ಸರ್ಕಾರ ಸರಳ ದಸರಕ್ಕೂ ಎಂದಿನಂತೆ 15 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿದೆ. ಇದನ್ನೂ ಓದಿ: ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ
ಸರಳ ದಸರಾಗೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ರೂಪಾಯಿ ನೀಡುತ್ತಿದೆ. ಅಲ್ಲಿಗೆ ದಸರಾಗೆ 15 ಕೋಟಿ ರೂಪಾಯಿ ಸಿಕ್ಕಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದಸರಾ ಉದ್ಘಾಟನೆ, ವಿಜಯದಶಮಿ ದಿನ ಅರಮನೆಯ ಒಳಗೆ ಜಂಬೂ ಸವಾರಿ ಹಾಗೂ ಅರಮನೆ ಆವರಣದಲ್ಲಿ 8 ದಿನ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ನಡೆಯಲಿದೆ. ಇಷ್ಟು ಮಾಡಲು 15 ಕೋಟಿ ರೂಪಾಯಿ ಏಕೆ ಎಂಬುದೇ ದೊಡ್ಡ ಪ್ರಶ್ನೆ.ಇದನ್ನೂ ಓದಿ: ಈ ಬಾರಿ ಮೈಸೂರಿನಲ್ಲಿ ಸರಳ ದಸರಾ ಆಚರಣೆ – ಏನಿರುತ್ತೆ? ಏನಿರಲ್ಲ?
ರಾಜಕಾರಣಿಗಳು, ಅಧಿಕಾರಿಗಳು ಹಣ ಮಾಡಲು ಇಷ್ಟೊಂದು ಪ್ರಮಾಣದಲ್ಲಿ ಹಣ ನಿಗದಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಈ ಬಾರಿ ಯಾವುದೇ ದಸರಾ ಉಪ ಸಮಿತಿಗಳಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ, ದೀಪಾಲಂಕಾರಕ್ಕೂ ಬ್ರೇಕ್ ಬಿದ್ದಿದೆ. ಇವುಗಳು ಇಲ್ಲದೇ ಇರುವಾಗ 15 ಕೋಟಿ ಹಣವನ್ನು ಎಲ್ಲಿ ಹೇಗೆ ಖರ್ಚು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಸ್ಪಷ್ಟನೆಯೇ ಬೇರೆ ರೀತಿ ಇದೆ. ಸರ್ಕಾರ ಹಣ ನೀಡಿರುವುದು ಕೇವಲ ದಸರಾ ಆಚರಣೆಗೆ ಮಾತ್ರವಲ್ಲ. ಸಮಗ್ರ ಮೈಸೂರು ಅಭಿವೃದ್ಧಿಗಾಗಿ. ಇದರಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಅಗತ್ಯಗಳಿಗೆ ಹಣ ಬಳಸಲಾಗುತ್ತದೆ. ಒಂದು ರೂಪಾಯಿಯೂ ದುರುಪಯೋಗ ಆಗಲು ಬಿಡುವುದಿಲ್ಲ. ಹಣದ ಬಳಕೆ ಪರಿಪೂರ್ಣ ಲೆಕ್ಕವನ್ನು ದಸರಾ ನಂತರ ನೀಡುತ್ತೇನೆ. ಕೊರೊನಾ ಸಂಕಷ್ಟ ಕಾಲದಲ್ಲೂ ದಸರಾಗೆ ಹಣ ನೀಡಿದೆ. ಇದರ ಸದುಪಯೋಗ ಮಾಡಿಕೊಳ್ಳುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ದಸರಾಗೆ ಉಳಿದಿರುವುದು ಇನ್ನೂ 30 ದಿನ ಮಾತ್ರ. ಇನ್ನೂ ರಸ್ತೆ ಕಾಮಗಾರಿಯ ರೂಪುರೇಷೆ ಸಿದ್ಧವಾಗಿಲ್ಲ. ಇದರ ನಡುವೆ ಮಳೆಯೂ ಬರುತ್ತಿದೆ. ಕಾಮಗಾರಿ ನಡೆಸಲು ಮಳೆ ಅಡಿಯಾಗುತ್ತದೆ. ಹೀಗಾಗಿ ಈ ಬಾರಿಯ ದಸರಾಗೆ ಬಿಡುಗಡೆಯಾಗಿರುವ ಹಣದ ಬಗ್ಗೆ ಭಾರೀ ಅನುಮಾನ ಮೂಡಿದೆ.