– ಸಚಿವ ಸ್ಥಾನ ಸಿಗಲಿ ಅಂತ ಪ್ರತಿಭಟನೆ ಮಾಡಬೇಡಿ
ಯಾದಗಿರಿ: ದಯವಿಟ್ಟು ಯಾರೂ ನನಗೆ ಸಚಿವ ಸ್ಥಾನ ಸಿಗಲಿ ಅಂತ ಪ್ರತಿಭಟನೆ ಮಾಡಬೇಡಿ. ಹೆದರಿಸಿದ್ರೆ ಸಚಿವ ಸ್ಥಾನ ನೀಡುವ ಹೈಕಮಾಂಡ್ ಇದಲ್ಲ. ನಮಗೆ ಸಚಿವ ಸ್ಥಾನ ಸಿಗುವ ಆಸೆ ಇದೆ, ಆದರೆ ದುರಾಸೆ ಇಲ್ಲ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.
ನೂತನ ಸಿಎಂರವರ ಸಚಿವ ಸಂಪುಟ ರಚನೆ ವಿಚಾರವಾಗಿ ಹುಣಸಗಿಯಲ್ಲಿ ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ ಅವರು, ನನಗೆ ಅದೃಷ್ಟ ಇಲ್ಲ. ಹೀಗಾಗಿ ಎಲ್ಲಾ ಅರ್ಹತೆ ಇದ್ದರೂ ನನಗೆ ಸಚಿವ ಸ್ಥಾನ ದೊರೆಯುತ್ತಿಲ್ಲ. ಸಚಿವ ಸ್ಥಾನದ ಆಯ್ಕೆಗೆ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ, ಯಾರನ್ನು ಸಚಿವರನ್ನಾಗಿ ಮಾಡಬೇಕು ಯಾರನ್ನು ಮಾಡಬಾರದೆಂದು ನಾಯಕರು ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಇದನ್ನೂ ಓದಿ: ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ
ಕಲ್ಯಾಣ ಕರ್ನಾಟಕ, ಕರಾವಳಿ, ಮೈಸೂರು ಭಾಗಕ್ಕೆ ಕಳೆದ ಬಾರಿ ಸಚಿವ ಸ್ಥಾನ ನೀಡುವಲ್ಲಿ ಸಮಸ್ಯೆ ಆಗಿತ್ತು. ಈ ಬಾರಿ ಮಾಜಿ ಸಿಎಂ ಬಿಎಸ್ವೈ, ಬಿಜೆಪಿ ರಾಜ್ಯಾಧ್ಯಕ್ಷರು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಡ್ಡಾ ಸಮಸ್ಯೆ ಆಗದಂತೆ ಮಾಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.