ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೆಚ್ಚು ಜನರಿಗೆ ಕೊರೊನಾ ಪರೀಕ್ಷೆ ನಡೆಸಿದರೆ ಇನ್ನೂ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶಾಸಕರನ್ನು ಕರೆದು ಸಭೆ ಮಾಡುತ್ತಿದ್ದಾರೆ. ಆದರೆ ಶಾಸಕರನ್ನು ಯಾಕೆ ಕರೆದಿದ್ದಾರೋ ಗೊತ್ತಿಲ್ಲ. ಐ ಡುನಾಟ್ ನೋ. ಅಕಾಲಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದರು. ಅದರಿಂದ ಆರೋಗ್ಯ ಹಾಳಾಯ್ತು, ಆರ್ಥಿಕತೆಯೂ ಹಾಳಾಯ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವ ಮುಂಜಾಗೃತಾ ಕ್ರಮವನ್ನು ಕಟ್ಟುನಿಟ್ಟಾಗಿ ತಗೆದುಕೊಳ್ಳದಿರುವುದರಿಂದ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚು ಜನರನ್ನು ಟೆಸ್ಟ್ ಗೆ ಒಳಪಟಿಸಿದರೆ ಇನ್ನೂ ಹೆಚ್ಚಿನ ಪ್ರಕರಣಗಳು ಕಂಡು ಬರಬಹುದು. ಆದರೆ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಆಗ ಲಾಕ್ ಡೌನ್ ಮಾಡಿದ್ದು ತಪ್ಪು. ನಿಜವಾಗಲೂ ಈಗ ಲಾಕ್ ಡೌನ್ ಮಾಡಬೇಕಿತ್ತು ಎಂದರು.
ಆಗ ಅಕಾಲಿಕವಾಗಿ ಲಾಕ್ ಡೌನ್ ಮಾಡಿದ್ದರು. ಜುಲೈ, ಆಗಸ್ಟ್ ಜಾಸ್ತಿ ಆಗುತ್ತೆ ಅಂತ ತಜ್ಞರು ಹೇಳಿದ್ದಾರೆ. ಇವರ ತಪ್ಪು ಏನು ಅನ್ನೊದನ್ನು ಆಲ್ ಪಾರ್ಟಿ ಮೀಟಿಂಗ್ ಕರೆಯಲಿ ಅಲ್ಲಿ ಹೇಳುತ್ತೇವೆ. ಸುಮ್ನೆ ಹೇಳಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗರಂ ಆದರು.