– ಪಕ್ಕದ್ಮನೆ ಬಾಗಿಲ ಮುಂದೆ ಶವ ಬಿಸಾಕಿದ್ರು
ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹಾಯದಿಂದ ತನ್ನ ಸಹೋದರನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಿಸಾಲ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಧ್ಯರಾತ್ರಿಯಲ್ಲಿ ಶವವನ್ನು ತಮ್ಮ ನೆರೆಹೊರೆಯವರ ಮನೆಯ ಬಾಗಿಲಿನ ಹೊರಗೆ ಎಸೆದಿದ್ದಾರೆ. ವೇದ ಪ್ರಕಾಶ್ (20) ಮೃತ ಯುವಕ. ಆರೋಪಿಗಳನ್ನು ಓಂ ಪ್ರಕಾಶ್ (30) ಮತ್ತು ಪತ್ನಿ ದೇವಿ (26) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ?
ಆರೋಪಿ ಓಂ ಪ್ರಕಾಶ್ ಅದೇ ಪ್ರದೇಶದ ದೇವಿಯ ಜೊತೆ ಮದುವೆಯಾಗಿದ್ದನು. ಆದರೆ ಮೃತ ವೇದ ಪ್ರಕಾಶ್ ಅತ್ತಿಗೆಯ ಮೇಲೆಯೇ ಕಣ್ಣಾಕಿದ್ದ. ಅಲ್ಲದೇ ಆಕೆಯೊಂದಿಗೆ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದು, ಪದೇ ಪದೇ ಆಕೆಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ತಿಳಿದು ಓಂ ಪ್ರಕಾಶ್ ಸಹೋದರನಿಗೆ ಬುದ್ಧಿವಾದ ಹೇಳಿದ್ದಾನೆ. ಆದರೂ ವೇದ ಪ್ರಕಾಶ್ ಮತ್ತೆ ಅದೇ ಕೆಲಸ ಮಾಡುತ್ತಿದ್ದನು. ಇದರಿಂದ ಕೋಪಗೊಂಡ ಆರೋಪಿ ರಾತ್ರಿ ವೇಳೆ ಸಹೋದರನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಇದಕ್ಕೆ ಪತ್ನಿ ದೇವಿ ಕೂಡ ಸಾಥ್ ನೀಡಿದ್ದು, ನಂತರ ಶವವನ್ನು ಪಕ್ಕದ ಮನೆಯ ಬಾಗಿಲಿನ ಮುಂದೆ ಎಸೆದಿದ್ದಾರೆ. ಆ ಬಳಿಕ ತನಗೂ ಕೊಲೆಗೂ ಸಂಬಂಧ ಇಲ್ಲವೆಂಬಂತೆ ನಾಟಕ ಶುರು ಮಾಡಿದ್ದ. ಗ್ರಾಮಸ್ಥರು ಬೆಳಗ್ಗೆ ಎದ್ದು ಶವ ನೋಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ವೇದ ಪ್ರಕಾಶ ತಂದೆ, ಹಿರಿಯ ಮಗ ಮತ್ತು ಆತನ ಹೆಂಡತಿ ಸೇರಿಕೊಂಡು ಕಿರಿಯ ಮಗನನ್ನು ಕೊಲೆ ಮಾಡಿದ್ದಾರೆ. ಅತ್ತಿಗೆಯ ಜೊತೆ ಕೆಟ್ಟದ್ದಾಗಿ ವರ್ತಿಸಿದ್ದಕ್ಕಾಗಿ ಆತನನ್ನು ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ತಂದೆ ನೀಡಿದ ದೂರಿ ಅನ್ವಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬ ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಓಂ ಪ್ರಕಾಶ್, ಆತ ನನ್ನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ. ನನಗೆ ಇಷ್ಟವಾಗಿಲ್ಲ, ಅದಕ್ಕೆ ಕೊಲೆ ಮಾಡಿದೆ ಎಂದು ಹೇಳಿದ್ದಾನೆ.