– ಸ್ಪೀಡ್ ಬ್ರೇಕರ್ ನೋಡದೆ ಬೈಕ್ ಹಾರಿಸಿದ ಸ್ನೇಹಿತೆ
ಚಂಡೀಗಢ: ಯುವತಿಯೊಬ್ಬಳು ತನ್ನ 22ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಸ್ನೇಹಿತೆ ನೊಂದಿಗೆ ಜಾಲಿರೈಡ್ಗೆ ಹೋಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.
ಮೃತಳನ್ನು ಅನು ಎಂದು ಗುರುತಿಸಲಾಗಿದೆ. ಹರಿಯಾಣದ 26ನೇ ವಲಯದ ಐಟಿಬಿಪಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಜಾಲಿ ರೈಡ್ಗೆ ಹೋಗಿದ್ದಾಗ ಬೈಕ್ನಿಂದ ಬಿದ್ದು ಅನು ಮೃತಪಟ್ಟಿದ್ದಾಳೆ.
ವೇಗವಾಗಿ ಬೈಕ್ ಚಾಲನೆ ಮಾಡಿದ್ದೆ ನನ್ನ ಮಗಳ ಸಾವಿಗೆ ಕಾರಣ ಎಂದು ಹೇಳಿ ಮೃತಳ ತಾಯಿ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ಚಂಡೀಗಢದ ಮೌಲಿ ಜಾಗ್ರಾನ್ನಲ್ಲಿ ನೆಲೆಸಿರುವ ಅನು ಸ್ನೇಹಿತೆ ಉಸ್ಮಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರಿಯಾಣದ ಡೇರಾ ಬಸ್ಸಿಯ ಖೇರಿ ಗ್ರಾಮದ ಮೂಲದ ಅನು ಸೆಕ್ಟರ್ 15ರ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದಳು.
ಭಾನುವಾರ ಅನು ಹುಟ್ಟುಹಬ್ಬ ಇತ್ತು. ಹೀಗಾಗಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿ ನಂತರ ಜಾಲಿ ರೈಡ್ಗೆ ಅಂತ ಬೈಕಿನಲ್ಲಿ ಉಸ್ಮಾನ್ ಕರೆದುಕೊಂಡು ಹೋಗಿದ್ದಾಳೆ. ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದು, ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್ ನೋಡದೆ ಅದರ ಮೇಲೆ ಬೈಕ್ ಹಾರಿಸಿದ್ದಾಳೆ. ಆಗ ಆಯ ತಪ್ಪಿ ಅನು ಕೆಳಗೆ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಅನು ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು. ಪಾರ್ಟಿಗೆ ಆಹ್ವಾನಿಸಲ್ಪಟ್ಟ ಉಸ್ಮಾನ್ ರಾತ್ರಿ 9.30ಕ್ಕೆ ಮಗಳನ್ನು ಬೈಕಿನಲ್ಲಿ ಜಾಲಿ ಡೈಡ್ಗೆ ಕರೆದುಕೊಂಡು ಹೋಗಿದ್ದಳು. ಆದರೆ ರಾತ್ರಿ 10.15ಕ್ಕೆ ನನ್ನ ಮಗಳ ಸ್ನೇಹಿತೆ ಆರತಿ ಫೋನ್ ಮಾಡಿ, ಅನುಗೆ ಅಪಘಾತವಾಗಿದೆ, ಆಕೆಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಳು ಎಂದು ತಾಯಿ ಉರ್ಮಿಲಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ.
ಅನು ಸಹೋದರಿ ಪ್ರಿಯಾಂಕಾ ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲಿ ಅನು ಮೃತಪಟ್ಟಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸದ್ಯಕ್ಕೆ ಪಂಚಕುಲ ಪೊಲೀಸರು ಐಪಿಸಿಯ ಸೆಕ್ಷನ್ ಅಡಿಯಲ್ಲಿ ಅನು ಸ್ನೇಹಿತೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.