ಚಿಕ್ಕೋಡಿ: ಜಿಲ್ಲೆಯ ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹುಕ್ಕೇರಿ ತಾಲೂಕು ಆಡಳಿತಕ್ಕೆ ಅಂಬುಲೆನ್ಸ್ ದಾನ ನೀಡುವದರ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸಚಿವ ಉಮೇಶ ಕತ್ತಿ ಅಂಬುಲೆನ್ಸ್ ಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಎರಡು ಅಂಬುಲೆನ್ಸ್ ನೀಡುವ ಮೂಲಕ ಸರ್ಕಾರದ ಜೋತೆ ಕೈ ಜೋಡಿಸಿದ್ದಾರೆ, ಅವರ ಕಾರ್ಯ ಶ್ಲಾಘನೀಯ ಎಂದರು.
ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀ ಗಳು ಜಿಲ್ಲೆಗೆ ಎರಡು ಅಂಬುಲೆನ್ಸ್ ನೀಡುವ ಮೂಲಕ ಸಾಮಾಜಿಕವಾಗಿ ಕಳಕಳಿ ಹೊಂದಿದ್ದಾರೆ ಎಂದರು.
ನಂತರ ವಿಡಿಯೋ ಸಂದೇಶ ಮೂಲಕ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ತಾಲೂಕಿನ ಜನರ ಅನಕೂಲಕ್ಕಾಗಿ ಶ್ರೀ ಮಠದಿಂದ ಅಂಬುಲೆನ್ಸ್ ನೀಡಲಾಗಿದೆ. ಈ ವರ್ಷ ಹಿರೇಮಠದ ಗುರುಶಾಂತೇಶ್ವರ ಜಾತ್ರಾ ಮಹೋತ್ಸವ ಕೈ ಬಿಟ್ಟು ಜನರ ಸೇವೆ ಮಾಡಲಾಗುತ್ತಿದೆ. ಹಿರೇಮಠದಿಂದ ಕೊರೊನಾ ಮೊದಲನೇ ಅಲೆಯಲ್ಲಿ 12 ಲಕ್ಷ ರೂಪಾಯಿ ಮೌಲ್ಯದ ಆಹಾರ ಕೀಟ್ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಉಮಾ ಸಾಲಿಗೌಡರ, ಕೃಷಿ ಅಧಿಕಾರಿ ಮಹಾದೇವ ಪಟಗುಂದಿ, ಮಹಾವೀರ ನಿಲಜಗಿ, ಪರಗೌಡಾ ಪಾಟೀಲ್, ಚನ್ನಪ್ಪಾ ಗಜಬರ, ಅಕ್ಷರ ದಾಸೋಹ ನಿರ್ದೆಶಕ ಶ್ರೀಶೈಲ್ ಹಿರೇಮಠ, ಮೊದಲಾದವರು ಉಪಸ್ಥಿತರಿದ್ದರು.