ಮಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಮತ್ತು ಬರಹಗಾರರಾಗಿ ಸೇವೆ ಸಲ್ಲಿಸಿರುವತಂಹ ಸಿ.ಹೆಚ್ ಜಾಕೋಬ್ ಲೋಬೋರವರ ಜೀವನ ಹಾಗೂ ಸಾಧನೆಯನ್ನು ಹೇಳುವಂತಹ “ಅನುಭೂತಿ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.
ಚಲನಚಿತ್ರ ರಂಗದಲ್ಲಿ ಲೇಖಕರಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವಂತಹ ಲೇಖಕ ಶ್ರೀನಿವಾಸ ಕೌಶಿಕ್ ಅವರು ರಚಿಸಿರುವ, ಬೆಂಗಳೂರಿನ ಅನಂತ ಪ್ರಕಾಶನದ ಉಮೇಶ್ ನಾಗಮಂಗಲ ಅವರು ಪ್ರಕಟಿಸಿರುವ “ಅನೂಭೂತಿ” ಪುಸ್ತಕವನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತ್ನ ಜಿಲ್ಲಾಧ್ಯಕ್ಷ ಎಸ್ .ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಸ್ವಾತಂತ್ರ್ಯ ಪೂರ್ವದಲ್ಲೇ ಜನಿಸಿರುವ ಜಾಕೋಬ್ ಲೋಬೋ ಅವರು ತಾನೊಬ್ಬ ಸರ್ಕಾರಿ ಅಧಿಕಾರಿಯಾಗಿದ್ದರೂ ತನ್ನ ಕಾರ್ಯಕ್ಷೇತ್ರವನ್ನು ಮೀರಿ ಬಡವರ ಸೇವೆ ಮಾಡಿದಂತವರು. ಅಂದಿನ ಕಾಲದ ಹಿಂದುಳಿದ ಬಡಕುಟುಂಬಗಳಿಗೆ ಅವರು ಮಾಡಿರುವ ಸೇವೆ ನೆನಪಿನಾಳದಲ್ಲಿ ಉಳಿಯುವಂತದ್ದು, ಇಂತಹ ಮಹಾನ್ ಸಾಧಕನ ಜೀವನ ಹಾಗೂ ಸಾಧನೆಯನ್ನು ತಿಳಿಸುವಂತಹ ಪುಸ್ತಕವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದ ಪ್ರದೀಪ್ ಕುಮಾರ್ ಕಲ್ಕೂರ ಅವರು ಜಾಕೋಬ್ ಲೋಬೋ ಅವರು ನಡೆದು ಬಂದ ದಾರಿಯನ್ನು ನೆನಪಿಸಿದರು.
ಈಗಾಗಲೇ ಕೋವಿಡ್ 19ರ ಈ ಸಂದರ್ಭದಲ್ಲಿ “ಅನುಭೂತಿ” ಪುಸ್ತಕವನ್ನು ಬೆಂಗಳೂರಿನಲ್ಲಿ ಜಾಕೋಬ್ ಲೋಬೋರಿಗೆ 90 ವರ್ಷ ತುಂಬಿದ ಸಂದರ್ಭದಲ್ಲಿ ಜೂನ್, 20ರಂದು ಅವರ ಸ್ವಗ್ರಹದಲ್ಲಿಯೇ ಹಿರಿಯರ ಹಾಗೂ ಸ್ನೇಹಿತರನ್ನು ಒಳಗೊಂಡ ಒಂದು ಪುಟ್ಟ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆ ಜಾಕೋಬ್ ಲೋಬೋರ ಕಾರ್ಯ ಕ್ಷೇತ್ರವಾಗಿದ್ದರಿಂದ ಹಾಗೂ ಜಾಕೋಬ್ ಲೋಬೋ ಅವರು ಹಿಂದುಳಿದ ವರ್ಗಕ್ಕೆ ಅನನ್ಯ ಸೇವೆ ಸಲ್ಲಿಸಿರುವುದರಿಂದ ಅವರ ಸೇವಾ ಅವಧಿಯಲ್ಲಿ ಹೆಚ್ಚಿನ ಭಾಗ ಇಲ್ಲಿಯೇ ಕಳೆದಿದ್ದರಿಂದ ಇಲ್ಲಿಯೇ ಒಂದು ಪರಿಚಯಾತ್ಮಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿಲಾಯಿತು ಎಂದು ಈ ಸಂದರ್ಭದಲ್ಲಿ ಲೇಖಕ ಶ್ರೀನಿವಾಸ ಕೌಶಿಕ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ, ಆರ್ ಶ್ರೀನಿವಾಸ್, ಶ್ರೀಮತಿ ಹೆಲನ್ ಲೋಬೋ ಮುಂತಾದವರು ಉಪಸ್ಥಿತರಿದ್ದರು.