– ಸರ್ಕಾರದಿಂದ ಅಧಿಕೃತ ಆದೇಶ
ಮಂಗಳೂರು: ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ ಕುರಿತು ಎದ್ದಿರುವ ಚರ್ಚೆಯ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ.
ರಾಜ್ಯದ 757 ಪ್ರಾರ್ಥನಾ ಕೇಂದ್ರಗಳಿಗೆ ಹಾಗೂ 111 ವರ್ಷಾಸನ ಪಡೆಯುತ್ತಿರುವ ಪ್ರಾರ್ಥನಾ ಕೇಂದ್ರಗಳಿಗೆ ಸರ್ಕಾರ ದೇವಸ್ಥಾನಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನೀಡುತ್ತಿದ್ದ ಅನುದಾನ ತಡೆ ಹಿಡಿದಿದ್ದು, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಸೂಚನೆಯಂತೆ ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ಕೊಡುವ ಹಕ್ಕಿದೆ: ಸಚಿವ ಕೋಟ
ಇನಾಂ ರದ್ದತಿ ಕಾಯ್ದೆ 1977 ರ ಪರಿಹಾರಾರ್ಥವಾಗಿ ನೀಡುತ್ತಿರುವ ತಸ್ತಿಕ್ ಮತ್ತು ವರ್ಷಾಸನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಸ್ಥಾನಗಳಿಂದ ನೀಡುವ ಬದಲು, ಇನ್ನು ಮುಂದೆ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಮೂಲಕ ತಸ್ತಿಕ್ ಮತ್ತು ವರ್ಷಾಸನ ನೀಡಲು ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವರದಿಯನ್ನಾಧರಿಸಿ ಸರ್ಕಾರ ಆದೇಶ ನೀಡಿದೆ.