ಹಾಸನ: ಕಲುಷಿತ ನೀರು ಸೇವಿಸಿ 35ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಬಂದೂರು ಬೋವಿ ಕಾಲೋನಿಯಲ್ಲಿ ಘಟನೆ ನಡೆದಿದೆ. ಬಂದೂರಿನಲ್ಲಿ ನೀರಿನ ಸಮಸ್ಯೆ ಇದ್ದು, ಅನಿವಾರ್ಯವಾಗಿ ಜನ ಬೋರ್ವೆಲ್ ನೀರನ್ನೇ ಕುಡಿಯುತ್ತಿದ್ದರು. ಇಂದು ಸಹ ಬೋರ್ವೆಲ್ನಲ್ಲಿ ಬರುತ್ತಿದ್ದ ಕಲುಷಿತ ನೀರನ್ನು ಸೇವಿಸಿ ಮಕ್ಕಳು, ವೃದ್ಧರು ಸೇರಿ ಸುಮಾರು 35 ಜನರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಹಲವರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥರೆಲ್ಲರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಮಾತ್ರ ಸಮಸ್ಯೆ ಬಗೆಹರಿಸಿರಲಿಲ್ಲ. ಇದರಿಂದ ಬಂದೂರು ಬೋವಿ ಕಾಲೋನಿ ನಿವಾಸಿಗಳು ಅನಿವಾರ್ಯವಾಗಿ ಬೋರ್ ವೆಲ್ ನಿಂದ ಬರುತ್ತಿದ್ದ ಕಲುಷಿತ ನೀರನ್ನೇ ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.