– ಈಗಾಗಲೇ ಹೊರರಾಜ್ಯದಿಂದ ಹಾಸನಕ್ಕೆ ಬಂದಿದ್ದಾರೆ 1400 ಜನ
ಹಾಸನ: ಹಾಸನಕ್ಕೆ ಮುಂಬೈ ಕಂಟಕ ಮತ್ತೆ ಮುಂದುವರೆದಿದ್ದು, ಇಂದು ಒಂದೇ ದಿನ ಹಾಸನದಲ್ಲಿ ಆರು ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಇಂದು ಚನ್ನರಾಯಪಟ್ಟಣ ಮೂಲದ ಇಬ್ಬರು, ಆಲೂರು ಮೂಲದ ಒಂದೇ ಕುಟುಂಬದ ಮೂವರು, ಹೊಳೆನರಸೀಪುರದ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇವರೆಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಆರು ಜನ ಸೋಂಕಿತರ ಜೊತೆ ಹಲವರು ಪ್ರಾಥಮಿಕ ಸಂಪರ್ಕದಲ್ಲಿದ್ದು ಸಂಜೆ ವೇಳೆಗೆ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್ ಹೊಳೆನರಸೀಪುರ ಮೂಲದ ಒಬ್ಬರಿಗೆ ಪಾಸಿಟಿವ್ ಬಂದಿದೆ. ಇವರು ಒಂದೇ ಕುಟುಂಬದ ಮೂವರು ಬಾಂಬೆಯಿಂದ ಬಂದಿದ್ದು, 37 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಆಲೂರು ಮೂಲದ ಒಂದೇ ಕುಟುಂಬದ ಮೂವರಿಗೆ ಪಾಸಿಟಿವ್ ಬಂದಿದೆ. ಇವರ ಬಳಿ ಸ್ವಂತ ಲಾರಿಯಿದ್ದು, ಸ್ವಂತ ಲಾರಿಯಲ್ಲಿ ಹಾಸನಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಇಬ್ಬರಿಗೆ ಪಾಸಿಟಿವ್ ಬಂದಿದೆ ಇವರಲ್ಲಿ ಒಬ್ಬರು ಟೆಂಪೋ ಟ್ರಾವೆಲ್ನಲ್ಲಿ ಬಂದಿದ್ದಾರೆ. ಅವರ ಜೊತೆ ಒಟ್ಟು 13 ಜನ ಪ್ರಯಾಣಿಸಿದ್ದು, ಎಲ್ಲರೂ ಕ್ವಾರಂಟೈನ್ನಲ್ಲಿ ಇದ್ದಾರೆ. ಮತ್ತೊಬ್ಬರು ಒಟ್ಟು 15 ಜನರೊಂದಿಗೆ ಮುಂಬೈನಿಂದ ಪ್ರಯಾಣ ಮಾಡಿ ಚನ್ನರಾಯಪಟ್ಟಣಕ್ಕೆ ಬಂದಿದ್ದಾರೆ. 15 ಜನರಲ್ಲಿ ತುಮಕೂರಿನವರು 10 ಜನ, ಚನ್ನರಾಯಪಟ್ಟಣದವರು 5 ಜನ ಇದ್ದಾರೆ. ಎಲ್ಲರೂ ಕ್ವಾರಂಟೈನ್ ಮಾಡಲಾಗಿದೆ ಎಂದು ಗಿರೀಶ್ ಅವರು ಹೇಳಿದ್ದಾರೆ.
ಇದುವರೆಗೂ ಹೊರರಾಜ್ಯದಿಂದ ಹಾಸನಕ್ಕೆ 1,400ಕ್ಕೂ ಹೆಚ್ಚು ಜನ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇಡಲಾಗಿದೆ. 1,200ಕ್ಕೂ ಹೆಚ್ಚು ಜನ ಹೊರರಾಜ್ಯದಿಂದ ಹಾಸನಕ್ಕೆ ಬರಲು ನೋಂದಾಯಿಸಿಕೊಂಡಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.