ಹಾವೇರಿ: ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ನಿರ್ದೇಶನದ ಜಂಗಲ್ ಕ್ರೈ ಚಿತ್ರ ತೀರ್ಪುಗಾರರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿ ಬಾಚಿಕೊಂಡ ನಿರ್ದೇಶಕ ಸಾಗರ ಬಳ್ಳಾರಿ ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ಬುಡಕಟ್ಟು ಜನಾಂಗದ ಅನಾಥ ಮಕ್ಕಳ ನೈಜ ಜೀವನದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ದೇಶಿಸಲಾಗಿದೆ. ಓಡಿಸ್ಸಾದ ಕಳಿಂಗ ಸೋಷಿಯಲ್ ಸೈನ್ಸ್ ಸಂಸ್ಥೆಯ ಬಾಲಕ 2007ರಲ್ಲಿ ಯುಕೆಯಲ್ಲಿ ನಡೆದ ರಗ್ಬಿ ಆಟದಲ್ಲಿ ಚಾಂಪಿಯನ್ ಆದ ಘಟನೆಯನ್ನು ಆಧರಿಸಿ ಚಿತ್ರವನ್ನು ನಿರ್ದೇಶಿಸಲಾಗಿದೆ.
ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ದಾದಾಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಆಚರಿಸಿಕೊಂಡು ಬರಲಾಗುತ್ತಿದೆ. ದೇಶದ ರಾಜಧಾನಿ ದೆಹಲಿ ಹಾಗೂ ದೆಹಲಿಗೆ ಹೊಂದಿಕೊಂಡ ನಗರಗಳಲ್ಲಿ ಈ ಚಲನಚಿತ್ರೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ನಿರ್ದೇಶಿಸಿದ ಜಂಗಲ್ ಕ್ರೈ ಚಲನಚಿತ್ರಕ್ಕೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಅತ್ಯುತ್ತಮ ಚಿತ್ರ 2021 ಎಂಬ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ದೊರೆತಿದೆ. ಬಾಲಿವುಡ್ ನ ಸೃಜನಾತ್ಮಕ ನಿರ್ದೇಶಕ ಸಾಗರಗೆ ಈ ಪ್ರಶಸ್ತಿ ದೊರೆತಿರುವುದು ಹಾವೇರಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇದನ್ನೂ ಓದಿ: ಹೆಚ್ಚು ಮಕ್ಕಳಿರುವ ಪೋಷಕರಿಗೆ 1ಲಕ್ಷ ರೂ ಬಹುಮಾನ
ಸುಮಾರು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿರೋ ನಿರ್ದೇಶಕ ಸಾಗರಗೆ ಮೋಟೆಬೆನ್ನೂರು ಅಂದರೆ ಎಲ್ಲಿಲ್ಲದ ಪ್ರೀತಿ. ವರ್ಷಕ್ಕೊಮ್ಮೆಯಾದರೂ ಕುಟುಂಬದವರ ಜೊತೆಗೆ ಮೋಟೆಬೆನ್ನೂರಿಗೆ ಬಂದು ಹೋಗುತ್ತಾರೆ. ವರ್ಷಕ್ಕೊಮ್ಮೆ ಊರಿಗೆ ಬರುವುದನ್ನು ಯಾವುದೇ ಕಾರಣಕ್ಕೂ ಸಾಗರ ಮರೆಯುವುದಿಲ್ಲ. ಮುಂಬೈನಲ್ಲೇ ಓದಿರೋ ಸಾಗರ, ಮುಂಬೈನ ಸತ್ಯಜೀತ್ ರೇ ಇನ್ ಸ್ಟಿಟ್ಯೂಟ್ ನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಗರ ಈವರೆಗೆ ಐದು ಸೃಜನಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ. ಸಾಗರ ನಮ್ಮ ಮೋಟೆಬೆನ್ನೂರು ಗ್ರಾಮದವನು ಹಾಗೂ ನಮ್ಮ ಸಂಬಂಧಿ ಎನ್ನುವುದು ನಮಗೆ ಖುಷಿಯ ಸಂಗತಿ ಎಂದು ನಿರ್ದೇಶಕ ಸಾಗರ ಸಂಬಂಧಿ ರಮೇಶ ಬಳ್ಳಾರಿ ಹೇಳುತ್ತಾರೆ.