ಬೆಂಗಳೂರು: ರೌಡಿಶೀಟರ್ ಬಬ್ಲಿ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಕಳೆದ ಸೋಮವಾರ ಬೆಂಗಳೂರಿನ ಕೊರಮಂಗಲದಲ್ಲಿ ಬ್ಯಾಂಕ್ ಗೆ ನುಗ್ಗಿ ಹಾಡಹಗಲೇ ಪತ್ನಿ ಮತ್ತು ಮಗಳ ಎದುರೇ ಬಬ್ಲಿಯನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೂರು ವಿಶೇಷ ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆ ಕಾರ್ಯ ಶುರುಮಾಡಿದ್ರು.
ಮಂಗಳವಾರ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ರು. ಇದರ ಬೆನ್ನಲ್ಲೇ ಫೀಲ್ಡ್ ಗಿಳಿದಿದ್ದ ಪೊಲೀಸರು, ಇಡೀ ರಾತ್ರಿ ಆರೋಪಿಗಳ ಬೆನ್ನು ಬಿದ್ದಿದ್ರು. ಈ ವೇಳೆ ಕೊಲೆ ಮಾಡಿದ ಆರೋಪಿಗಳಾದ ರವಿ , ಮತ್ತು ಪ್ರದೀಪ್ ಇಲ್ಲಿನ ಬೇಗೂರು ಕೆರೆ ಬಳಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ಯಡಿಯೂರಪ್ಪ ಸರ್ಕಾರವನ್ನು ಕೆಳಗಿಳಿಸಿದರೆ ಬಿಜೆಪಿ ಸರ್ವನಾಶ: ಶ್ರೀ ಕಾರದವೀರಬಸವ ಸ್ವಾಮೀಜಿ
ಬೆಳಗ್ಗಿನ ಜಾವ ಸ್ಥಳಕ್ಕೆ ಎಂಟ್ರಿಯಾದ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದರು. ಆದರೆ ಪೊಲೀಸರು ಸುತ್ತುವರಿದಿರೋ ವಿಚಾರ ತಿಳಿದ ರವಿ ಮತ್ತು ಪ್ರದೀಪ್ ಅಲ್ಲಿಂದ ಎಸ್ಕೇಪ್ ಆಗೋಕೆ ಯತ್ನಿಸಿದ್ದಾರೆ. ಈ ವೇಳೆ ಅಡ್ಡವಾಗಿ ಬಂದ ಸಬ್ ಇನ್ಸ್ ಪೆಕ್ಟರ್ ಸಿದ್ದಪ್ಪ ಮತ್ತು ಎಎಸ್ ಐ ರವೀಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡೋಕೆ ಮುಂದಾದರು.
ಈ ವೇಳೆ ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ರವಿ ಇಬ್ಬರ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಬಬ್ಲಿ ಕೊಲೆ ನಡೆದಿದ್ದು, ಇನ್ನೂ ನಾಲ್ಕೈದು ಜನ ಆರೋಪಿಗಳು ಸಿಗಬೇಕಿದೆ. ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ. ಉಳಿದ ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಅವರನ್ನು ಕೂಡ ಬಂಧಿಸುವ ವಿಶ್ವಾಸದಲ್ಲಿ ಪೊಲೀಸರಿದ್ದಾರೆ.