– ಸಹಾಯಕ್ಕೆ ಮುಂದಾಗದ ವಾಹನ ಸವಾರರು
– ತೀವ್ರ ರಕ್ತಸ್ರಾವದಿಂದ ವ್ಯಕ್ತಿ ಸಾವು
ಲಕ್ನೋ: ನಡುಬೀದಿಯಲ್ಲಿ ವ್ಯಕ್ತಿಯೊಬ್ಬನನ್ನು ಇಬ್ಬರು ಪುರುಷರು ಸೇರಿ ಕೋಲಿನಿಂದ ಸಾಯುವಂತೆ ಹೊಡೆದಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಹೊಡೆಯುವಾಗ ವ್ಯಕ್ತಿ ಅಲುಗಾಡದೇ ರಕ್ತದ ಮಡುವಿನಲ್ಲಿ ಒಂದೇ ಜಾಗದಲ್ಲಿ ಮಲಗಿದ್ದಾನೆ.
ಹಾಡಹಗಲೇ ರಸ್ತೆಯಲ್ಲಿ ಈ ಕೃತ್ಯ ನಡೆಯುತ್ತಿದ್ದರೂ ದಾರಿಯಲ್ಲಿ ಹೋಗುತ್ತಿದ್ದ ವಾಹನಗಳ ಸವಾರರು ತಮ್ಮ ವಾಹನವನ್ನು ನಿಲ್ಲಿಸಿ ಕೃತ್ಯವನ್ನು ತಡೆದು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಲಿಲ್ಲ. ಬದಲಾಗಿ ಈ ಭಯಾನಕ ದೃಶ್ಯವನ್ನು ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಸೆರೆ ಹಿಡಿದ್ದಾನೆ. ವ್ಯಕ್ತಿ ರಕ್ತಸಿಕ್ತವಾಗಿ ಒದ್ದಾಡುತ್ತಿದ್ದರೂ ಕೃತ್ಯವನ್ನು ತಡೆದು ಆತನ ಸಹಾಯಕ್ಕೆ ಯಾರು ಮುಂದೆ ಬರದಿರುವ ಘಜಿಯಾಬಾದ್ನ ಈ ವಿಡಿಯೋ ಜನರು ಮತ್ತೊಮ್ಮೆ ಮನುಷ್ಯತ್ವವನ್ನು ಮರೆತಿರುವುದು ಎದ್ದು ಕಾಣುಸುತ್ತಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಅಜಯ್ ಎಂದು ಗುರುತಿಸಲಾಗಿದ್ದು, ಸೋಮವಾರ ಬೆಳಗ್ಗೆ ರಸ್ತೆಯಲ್ಲಿಯೇ ಥಳಿತದಿಂದ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಕೊಲೆಯಾದ ವ್ಯಕ್ತಿ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಈ ವಿಚಾರವಾಗಿ ಸಂಧಾನ ಮಾಡಿಸಿದ್ದಾರೆ. ಅಜಯ್ ಸಹೋದರ ಮತ್ತು ಆರೋಪಿ ಗೋವಿಂದ್ ನಡುವೆ ಹೂವಿನ ಅಂಗಡಿ ಸ್ಥಾಪಿಸುವ ವಿಚಾರವಾಗಿ ಕೆಲವು ದಿನಗಳಿಂದ ವಿವಾದವಿತ್ತು. ಆದ್ರೆ ಅಜಯ್ನನ್ನು ಹೊಡೆಯುವ ವಿಡಿಯೋದಲ್ಲಿ ಗೋವಿಂದ್ ಜೊತೆ ಆತನ ಸ್ನೇಹಿತ ಅಮಿತ್ ಕೂಡ ಕಾಣಿಸಿಕೊಂಡಿದ್ದಾನೆ.
ಕೋಲಿನಿಂದ ತೀವ್ರವಾಗಿ ಹೊಡೆದ ಕಾರಣ ಅಜಯ್ಗೆ ರಸ್ತೆಯಲ್ಲಿ ರಕ್ತ ಚಿಮ್ಮುತ್ತಿತ್ತು. ಅಲ್ಲಿಯವರೆಗೆ ಆರೋಪಿಗಳು ಸ್ಥಳದಲ್ಲಿಯೇ ಇರುವುದು ವಿಡಿಯೋನಲ್ಲಿ ಕಾಣಿಸುತ್ತದೆ.
ಕೊಲೆಯಾದ ವ್ಯಕ್ತಿಯ ಸಹೋದರ ಈ ಘಟನೆ ಕುರಿತಂತೆ ಪೊಲೀಸರಿಗೆ ದೂರು ದಾಖಲಿಸಿದ ನಂತರವು ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.