ಬೆಂಗಳೂರು: ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ್ದ ಕೋವಿಡ್-19 ಹಾಟ್ಸ್ಪಾಟ್ಗಳಲ್ಲಿ ಒಂದಾದ ಹೊಂಗಸಂದ್ರ ವಾರ್ಡ್ ಈಗ ಕೊರೊನಾ ಮುಕ್ತವಾಗಿದೆ.
ತವರಿಗೆ ಹೋಗಲು ವಲಸೆ ಕಾರ್ಮಿಕರು ಒತ್ತಡ ಹೇರಿದ ಕಾರಣಕ್ಕೆ ಬಿಬಿಎಂಪಿ ಅವರೆಲ್ಲರಿಗೂ ತಮ್ಮ ಊರನ್ನು ಸೇರಲು ವ್ಯವಸ್ಥೆ ಮಾಡಿಕೊಟ್ಟಿದೆ. ಈ ಹಿನ್ನೆಲೆ ಕೊರೊನಾ ಸೋಂಕಿತರು, ಶಂಕಿತರು, ಗುಣಮುಖರಾದವರ ಕ್ವಾರಂಟೈನ್ ಮುಗಿದ ಕೂಡಲೇ ವಾರ್ಡ್ನಿಂದ ಜಾಗ ಖಾಲಿ ಮಾಡಿದ್ದಾರೆ. ಸುಮಾರು 106 ವಲಸೆ ಕಾರ್ಮಿಕರನ್ನು ಸ್ವಂತ ಊರಿಗೆ ತಲುಪಲು ಬಿಬಿಎಂಪಿ ಸಹಾಯ ಮಾಡಿದೆ. ಹೀಗಾಗಿ ಕೊರೊನಾ ಹಾಟ್ಸ್ಪಾಟ್ ಆಗಿದ್ದ ಹೊಂಗಸಂದ್ರ ಈಗ ಕೊರೊನಾ ಮುಕ್ತ ಪ್ರದೇಶವಾಗಿದೆ.
ಆದರೆ ಪಕ್ಕದ ಮಂಗಮ್ಮನಪಾಳ್ಯ ವಾರ್ಡ್ನಲ್ಲಿ ಇನ್ನೂ ಕೊರೊನಾ ಶಂಕಿತರು ಇದ್ದಾರೆ. ಸುಮಾರು 46 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಅಲ್ಲದೆ ಶಂಕಿತರ ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಅವರಿಗೆ ಕೊರೊನಾ ಪರೀಕ್ಷೆ ಮಾಡಿ, ಸೋಂಕು ತಗುಲಿಲ್ಲ ಎಂದು ದೃಢವಾದ ಮೇಲೆಯೇ ಅವರನ್ನು ಕ್ವಾರಂಟೈನ್ನಿಂದ ಬಿಡುಗಡೆಗೊಳಿಸಲಾಗುತ್ತದೆ.
ಇಂದು ಕರ್ನಾಟಕದಲ್ಲಿ ಒಟ್ಟು 84 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಒಟ್ಟು 18 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.