ಚೆನ್ನೈ: ಕೋವಿಡ್ ಲಾಕ್ಡೌನ್ ಸಮಯದಲ್ಲಿ ಹಸಿದ ಹೊಟ್ಟೆಗಳಿಗೆ ಒಂದು ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಊಟ ನೀಡುವ ಮೂಲಕವಾಗಿ ತಮಿಳುನಾಡಿನ ದಂಪತಿ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ.
ಪುಷ್ಪರಾಣಿ, ಚಂದ್ರಶೇಖರ್ ದಂಪತಿ ಲಾಕ್ಡೌನ್ ವೇಳೆಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರವಾದ ಆಹಾರವನ್ನು ನೀಡುವ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವಾಗ ಲಾಕ್ಡೌನ್ ಮಾಡಲಾಗಿತ್ತು. ಈ ವೇಳೆ ಎಷ್ಟೋ ಜನ ಊಟವಿಲ್ಲದೆ ಹಸಿದುಕೊಂಡು ಇದ್ದರು. ರಸ್ತೆ ಬದಿಯಲ್ಲಿ ದಿನಗೂಲಿ ಮಾಡುವವರು, ಕೆಲಸ ಕಳೆದುಕೊಂಡಿರುವ ಅದೆಷ್ಟೋ ಜನರನ್ನು ನಾವು ನೋಡಿದ್ದೇವೆ. ಈ ವಿಚಾರವನ್ನು ನಾವು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆ ಉತ್ತಮ ಆಹಾರವನ್ನು ಕೊಡಲು ನಿರ್ಧರಿಸಿದ್ದೆವು. 1 ರುಪಾಯಿಗೆ ಇಡ್ಲಿ, ಚಟ್ನಿ ನೀಡುತ್ತೇವೆ ಎಂದು ಪುಷ್ಪರಾಣಿ ಹೇಳಿದ್ದಾರೆ.
ಲಾಕ್ಡೌನ್ ಆಗುವ ಮೊದಲು ಚಂದ್ರಶೇಖರ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ನಂತರ ಆರ್ಥಿಕ ಸಮಸ್ಯೆಯಿಂದಾಗಿ ಆ ಕೆಲಸವನ್ನು ಬಿಟ್ಟು ಹೋಟೆಲ್ ಪ್ರಾರಂಭಿಸಿದ್ದರು. ಬ್ಯಾಂಕಿನಲ್ಲಿ 50.000 ಸಾಲ ಪಡೆದು ಈ ದಂಪತಿ ಬಡ ಜನರಿಗಾಗಿ ಸಹಾಯವಾಗುವಂತೆ ಊಟವನ್ನು ಕೊಡಲು ಪ್ರಾರಂಭಿಸಿದರು.
ಪ್ರತಿದಿನ ಸರಿಸುಮಾರು 400 ಮಂದಿ ಊಟವನ್ನು ಮಾಡುತ್ತಾರೆ. ಪ್ರತಿನಿತ್ಯ 4 ಗಂಟೆಗೆ ಎದ್ದು ಅಡುಗೆಯನ್ನು ಪ್ರಾರಂಭಿಸುತ್ತೇವೆ. ಮನೆಯ ಮಕ್ಕಳು ಕೂಡಾ ಸಹಾಯ ಮಾಡುತ್ತಾರೆ. ಬೆಳಗ್ಗೆ 7 ಗಂಟೆಗೆ ತಿಂಡಿ ಮಾರಾಟ ಮಾಡಿದರೆ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಊಟವನ್ನು ಮಾರಾಟ ಮಾಡುತ್ತೇವೆ. ಜನರಿಗೆ ನಮ್ಮಿಂದಾದಷ್ಟು ಸಹಾಯವಾಗಲಿ ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಕುಟುಂಬ ಹೇಳಿಕೊಂಡಿದೆ.