ಕಾರವಾರ: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರವಾರ ಕದಂಬ ನೌಕಾದಳವು ನಿರ್ಬಂಧಿತ ಅಂಜುದೀವ್ ನಲ್ಲಿ ಹಾರಿಸಿದ್ದ ಧ್ವಜವು ಹರಿದುಹೋಗಿದ್ದರೂ ಗಮನಿಸದೇ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ನೌಕಾದಳವು ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಅಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಇದೇ ಮೊದಲ ಬಾರಿಗೆ ಪೋರ್ಚುಗೀಸರಿಂದ ಸ್ವತಂತ್ರ್ಯ ಬಂದ ನಂತರ ವಶಪಡಿಸಿಕೊಂಡಿದ್ದ ನಿರ್ಬಂಧಿತ ಅಂಜುದೀವ್ ದ್ವೀಪದಲ್ಲಿ ಕರ್ನಾಟಕ ನೌಕಾ ವಲಯದ ಪ್ಲಾಗ್ ಆಫೀಸರ್ ಮಹೇಶ್ ಸಿಂಗ್ ರಿಂದ ಶನಿವಾರ ಧ್ವಜಾರೋಹಣ ನೆರವೇರಿತ್ತು. ಆದರೆ ಧ್ವಜದ ಕೆಳಭಾಗದ ಹಸಿರು ಪಟ್ಟಿಯಲ್ಲಿ ಹರಿದು ರಂದ್ರವಾಗಿತ್ತು. ಇದನ್ನು ಗಮನಿಸದ ನೌಕಾದಳವು ಹಾಗೆಯೇ ಧ್ವಜವನ್ನು ಹಾರಿಸಿದ್ದು, ಹರಿದಿದ್ದನ್ನು ಗಮನಿಸದೇ ಇಂದೂ ಕೂಡ ದ್ವೀಪದಲ್ಲಿ ಹಾರಾಡಿದೆ. ಭಾರತೀಯ ಧ್ವಜ ನೀತಿ ಸಂಹಿತೆಗೆ ದೇಶದ ಅತ್ಯುನ್ನತ ಸಂಸ್ಥೆ ಅಗೌರವ ತೋರುವ ಮೂಲಕ ಧ್ವಜಕ್ಕೆ ಅವಮಾನ ಮಾಡಿದೆ.
ಪೋರ್ಚುಗೀಸರ ವಶದಲ್ಲಿದ್ದ ಅಂಜು ದೀವ್
ವಾಸ್ಕೋಡಿಗಾಮ ಮೊದಲು ಈ ಭಾಗದಲ್ಲಿ ನೆಲೆ ನಿಂತಿದ್ದ ದ್ವೀಪ ಇದಾಗಿದ್ದು, ಇಲ್ಲಿ ಪೋರ್ಚುಗೀಸರು ಸ್ವತಂತ್ರ ಪೂರ್ವದಲ್ಲಿ ತಮ್ಮ ವಸಾಹತುವನ್ನು ಸ್ಥಾಪಿಸಿದ್ದರು. ಕಾರವಾರ ತಾಲೂಕಿಗೆ ಅತೀ ಸಮೀಪವಾಗಿದ್ದರೂ ಸ್ವಾತಂತ್ರ್ಯದ ನಂತರ ಪೋರ್ಚುಗೀಸರಿಂದ ಭಾರತ ಸರ್ಕಾರ ವಶಪಡಿಸಿಕೊಂಡಿದ್ದರಿಂದ ಈ ಭಾಗವು ಗೋವಾ ರಾಜ್ಯಕ್ಕೆ ಸೇರುತ್ತದೆ. ಹಿಂದೆ ಈ ದ್ವೀಪಕ್ಕಾಗಿ ಪೋರ್ಚುಗೀಸರು, ಬ್ರಿಟೀಷರು, ಮರಾಠಿ ಹಾಗೂ ಟಿಪ್ಪು ಸುಲ್ತಾನ್ ಸಹ ಯುದ್ಧ ಮಾಡಿರುವ ಇತಿಹಾಸ ವಿದೆ.
ಗೋವಾವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದ ಪೋರ್ಚುಗೀಸರು, ನಂತರ ಸ್ವಾತಂತ್ರ್ಯ ಬಂದರೂ ಈ ಪ್ರದೇಶವನ್ನು ಬಿಟ್ಟುಕೊಟ್ಟಿರಲಿಲ್ಲ. ಬಳಿಕ ಭಾರತ ಸರ್ಕಾರವು ಪೋರ್ಚುಗೀಸರ ಜೊತೆ ಯುದ್ಧ ಮಾಡಿ ವಶಪಡಿಸಿಕೊಂಡಿತ್ತು. 1960 ರಲ್ಲಿ ಇದು ಭಾರತಕ್ಕೆ ಸೇರ್ಪಡೆಗೊಂಡ ದ್ವೀಪವಾಯಿತು. ಇಂದಿರಾ ಗಾಂಧಿ ಸರ್ಕಾರದ ಸಂದರ್ಭದಲ್ಲಿ ಕಾರವಾರದಲ್ಲಿ ಕದಂಬ ನೌಕಾನೆಲೆ ಸ್ಥಾಪನೆಯಾದ ನಂತರ ಈ ದ್ವೀಪದವರೆಗೆ ಬ್ರೇಕ್ ವಾಟರ್ ಅನ್ನು ನಿರ್ಮಾಣ ಮಾಡಲಾಗಿದ್ದು, ಈ ಪ್ರದೇಶಕ್ಕೆ ತೆರಳಲು ನಿರ್ಬಂಧವಿದೆ.