ಹಾಸನ: ಹಬ್ಬದ ದಿನವೇ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದೇವಿಹಳ್ಳಿ ಗ್ರಾಮದಲ್ಲಿ ನಡೆದಿದೆ.
17 ವರ್ಷದ ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಗಣೇಶ ಹಬ್ಬದ ದಿನವೇ ಪ್ರಿಯಾಂಕಾ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಈ ಕುರಿತು ಮೃತಳ ಸಂಬಂಧಿ ದೂರು ದಾಖಲಿಸಿದ್ದಾರೆ. ಹೀಗಾಗಿ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ಶಾಂತಿಗ್ರಾಮ ಹೋಬಳಿಯ ಅದ್ದಿಹಳ್ಳಿ ಗ್ರಾಮದ ನಿವಾಸಿ ರಾಮೇಗೌಡ ಜೊತೆ ದೂರದಾರರ ಸಂಬಂಧಿ ಕಾಮಾಕ್ಷಿ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು. ಆದರೆ 15 ವರ್ಷದ ಹಿಂದೆ ಕಾಮಾಕ್ಷಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದರು. ನಂತರ ರಾಮೇಗೌಡ ಎರಡನೇ ಮದುವೆಯಾದನು. ಆಕೆಗೂ ಒಂದು ಮಗುವಿದೆ. ಪ್ರಿಯಾಂಕಾ ತಂದೆ ಮತ್ತು ಮಲತಾಯಿಯ ಜೊತೆ ವಾಸಿಸುತ್ತಿದ್ದಳು. ಆದರೆ ತಂದೆಯ ಎರಡನೇ ಪತ್ನಿ ಬೇರೆ ಪುರುಷನ ಜೊತೆ ಓಡಿ ಹೋಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ಮರ್ಯಾದೆ ಹಾಳಾಯಿತಲ್ಲಾ ಎಂದು ಪ್ರಿಯಾಂಕಾ ಯೋಚನೆ ಮಾಡುತ್ತಿದ್ದಳು. ಶನಿವಾರ ಯಾವುದೋ ವೈಯಕ್ತಿಯ ವಿಚಾರಕ್ಕೆ ಪ್ರಿಯಾಂಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೂ ನನಗೆ ಅನುಮಾನ ಇದೆ. ಹೀಗಾಗಿ ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.