ಚೆನ್ನೈ: ಪೊಂಗಲ್ ಹಬ್ಬದ ಪ್ರಯುಕ್ತ 2,500 ರೂ. ಉಡುಗೊರೆಯಾಗಿ ನೀಡುವಂತೆ ತಂದೆಗೆ ಪೀಡಿಸುತ್ತಿದ್ದ ವ್ಯಕ್ತಿಯನ್ನು ಆತನ ಅಣ್ಣನೇ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಆರ್ ವಿಶ್ವಲಿಂಗಂ ಎಂದು ಗುರುತಿಸಲಾಗಿದ್ದು, ಈತ ಸಿರಾಮೆಲ್ಕುಡಿಯ ನಿವಾಸಿ. ಈತನಿಗೆ ವಿವಾಹ ಆಗಿದೆ. ತಂದೆಯನ್ನು ರಾಮನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ವಿಶ್ವಲಿಂಗಂ ಹಾಗೂ ಆತನ ಅಣ್ಣ ಬಾಸುಬ್ರಮಣಿಯನ್ ಇಬ್ಬರು ಮದ್ಯಪಾನ ಸೇವಿಸಿದ್ದರು ಎಂದು ಎಂದು ತಿಳಿದುಬಂದಿದೆ.
ವಿಶ್ವಲಿಂಗಂ ತಂದೆ ರಾಮನ್ಗೆ ಗ್ರಾಮದ ಪಿಡಿಎನ್ ಅಂಗಡಿಯಿಂದ ಪೊಂಗಲ್ ಹಬ್ಬಕ್ಕೆ ಉಡುಗೊರೆಯಾಗಿ 2,500 ನೀಡಲಾಗಿತ್ತು. ಅದೇ ಸಮಯಕ್ಕೆ ಮದ್ಯಪಾನ ಸೇವಿಸಿ ಬಂದ ವಿಶ್ವಲಿಂಗಂ, ತಂದೆ ಹಣ ಪಡೆದಿರುವುದನ್ನು ಕೇಳಿ ಆ ಹಣವನ್ನು ತನಗೆ ಹಸ್ತಾಂತರಿಸುವಂತೆ ಕೇಳಿದ್ದಾನೆ.
ಹಣ ನೀಡಿದರೆ ವಿಶ್ವಲಿಂಗಂ ಎಲ್ಲಿ ಮದ್ಯಪಾನಕ್ಕಾಗಿ ಖರ್ಚು ಮಾಡಿ ವ್ಯರ್ಥ ಮಾಡುತ್ತಾನೋ ಎಂಬ ಅನುಮಾನದಿಂದ ರಾಮನ್, ಆ ಹಣವನ್ನು ಮಗನಿಗೆ ನೀಡಲು ನಿರಾಕರಿಸಿದ್ದಾರೆ. ಆದರೂ ವಿಶ್ವಲಿಂಗಂ ಬಿಡದೆ ತನ್ನ ತಂದೆಗೆ ಹಣ ನೀಡುವಂತೆ ಒತ್ತಾಯಿಸುತ್ತಲೇ ಮಾತು ಮುಂದುವರಿಸಿದ್ದಾನೆ. ಜಗಳ ತಾರಕಕ್ಕೇರಿ ಕುಡುಗೋಲು ಎತ್ತಿಕೊಂಡು ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಗಾಯಗೊಂಡ ರಾಮನ್ ಅವರನ್ನು ಕೂಡಲೇ ಮಥುಕೂರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಶ್ವಲಿಂಗಂ ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದ ರಾಮನ್ ಹಿರಿಯ ಮಗ ಆರ್ ಬಾಲಸುಬ್ರಮಣಿಯನ್ ತಮ್ಮನೊಂದಿಗೆ ವಾದ ಮಾಡಿದ್ದಾನೆ. ಕೊನೆಗೆ ವಾದ ಇಬ್ಬರ ಮುಂಗೋಪಕ್ಕೆ ತಿರುಗಿ ಬಾಲಸುಬ್ರಮಣಿಯನ್ ಲಾಂಗ್ ತೆಗೆದು ವಿಶ್ವಲಿಂಗಂ ತಲೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ವಿಶ್ವಲಿಂಗಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.