– ಹಫ್ತಾ ವಸೂಲಿಗಾಗಿ ಉದ್ಯಮಿಗೆ ಧಮ್ಕಿ
ಧಾರವಾಡ: ಮುಂಬೈ ಮೂಲದ ಯೂಸುಫ್ ಖಾದ್ರಿ ಅಲಿಯಾಸ್ ಬಚ್ಚಾ ಖಾನ್ ಧಾರವಾಡದಲ್ಲಿ ಸಹ ತಲೆನೋವಾಗಿದ್ದು, ವಿದ್ಯಾನಗರಿಯಲ್ಲಿ ಹಫ್ತಾ ವಸೂಲಿಗಾಗಿ ತನ್ನ ಸಹಚರನ್ನು ಇಳಿಸಿದ್ದು, ಉದ್ಯಮಿ ದರಗದ ಅವರು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಉಪನಗರ ಪೊಲೀಸರು ಬಚ್ಚಾ ಖಾನಗೆ ಬಾಡಿ ವಾರಂಟ್ ಮೇಲೆ ಮೈಸೂರು ಜೈಲಿನಿಂದ ಧಾರವಾಡಕ್ಕೆ ಕರೆ ತಂದು, ಧಾರವಾಡ ಪ್ರಧಾನ ಜಿಲ್ಲಾ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ಕೋರ್ಟ್, ಬಚ್ಚಾ ಖಾನ್ನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಈ ವೇಳೆ ಬಚ್ಚಾ ಖಾನ್ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ನ್ಯಾಯಾಲಯದ ಎದುರು ಹೇಳಿಕೊಂಡಿದ್ದಾನೆ. ಅಲ್ಲದೆ ಮೈಸೂರು ಜೈಲಿನಲ್ಲಿ 60 ಮೊಬೈಲ್ ಸಿಕ್ಕರೂ ಯಾರ ಮೇಲೂ ಪ್ರಕರಣ ದಾಖಲಾಗಿಲ್ಲ, ನನ್ನ ಮೇಲೆಯೇ ಏಕೆ ಪ್ರಕರಣ ದಾಖಲಿಸಿಕೊಂಡಿದ್ದು ಪ್ರಶ್ನಿಸಿದ್ದಾನೆ. ನನ್ನ ಹೆಸರು ಹೇಳಿ ಯಾರು ಧಮ್ಕಿ ಹಾಕಿದ್ದಾರೋ ಅವರ ಮೇಲೆ ದೂರು ನೀಡಿ, ಇದರಲ್ಲಿ ನನ್ನ ತಪ್ಪಿಲ್ಲ ಎಂದಿದ್ದಾನೆ.
ಬಚ್ಚಾ ಖಾನ್ ಪರ ವಕೀಲರು ಸಹ ಪೊಲೀಸರೇ ಮೊಬೈಲ್ ಫೋನ್ ಇಟ್ಟು ಈ ರೀತಿ ಆರೋಪ ಮಾಡುತ್ತಿದ್ದಾರೆ. ಜೈಲಿನಲ್ಲಿ ಇಷ್ಟೆಲ್ಲ ಭದ್ರತೆ ಇದ್ದಾಗ ಮೊಬೈಲ್ ಹೇಗೆ ಜೈಲಿಗೆ ಹೋಯಿತು. ಇದರಲ್ಲಿ ಸಿಬ್ಬಂದಿ ಕೈವಾಡ ಇದೆ. ಕಳೆದ 16 ವರ್ಷಗಳಿಂದ ಜೈಲಿನಲ್ಲಿರುವ ಬಚ್ಚಾ ಖಾನ್, ಈಗ ಬಿಡುಗಡೆಯಾಗುತ್ತಿದ್ದಾನೆ. ಇಂತಹ ಸಮಯದಲ್ಲಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಬಚ್ಚಾ ಖಾನ್ ಪರ ವಕೀಲರು ವಾದಿಸಿದ್ದಾರೆ.