ಕೊಪ್ಪಳ: ರಾಮನ ಭಕ್ತ ಹನುಮಂತ ಹುಟ್ಟಿದ್ದು, ತಿರುಪತಿಯಲ್ಲಿ ಎಂದು ಟಿಟಿಡಿ ಹೇಳಿಕೆ ನೀಡುತ್ತಿದೆ. ಅದು ಸುಳ್ಳು ಹನುಮ ಹುಟ್ಟಿದ್ದು, ಕಿಷ್ಕಿಂದ ಆನೆಗೊಂದಿಯಲ್ಲಿಯೇ ಎಂದು ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ಹೇಳಿದರು.
ಜಿಲ್ಲೆಯ ಗಂಗಾವತಿ ನಗರದ ಬಿಜೆಪಿ ಕಾರ್ಯಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಾಯಣ ಕಾಲದಿಂದಲೂ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಹನುಮ ಹುಟ್ಟಿದ್ದು ಕಿಷ್ಕಿಂದದಲ್ಲಿಯೇ ಎನ್ನುವುದಕ್ಕೆ ಸಾಕಷ್ಟು ಕುರುಹುಗಳು ದೊರೆಯುತ್ತವೆ. ಆದರೆ ಟಿಟಿಡಿಯವರು ತಿರುಪತಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಹುಟ್ಟಿದ್ದಾನೆ ಎಂದು ಪುರಾಣಗಳನ್ನು ಆಧರಿಸಿ, ಅವುಗಳನ್ನೇ ಆಧಾರವಾಗಿಟ್ಟುಕೊಂಡು ಹೇಳಿಕೆಯನ್ನು ನೀಡುತ್ತಿದೆ ಎಂದರು.
ವಾಸ್ತವವಾಗಿ ಹನುಮ ಹುಟ್ಟಿದ್ದು, ಆನೆಗೊಂದಿಯಲ್ಲಿಯೇ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ರಾಮಾಯಣ ಕಾಲದಿಂದಲೂ ವಾನರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದ್ದು, ರಾಮನಿಗಾಗಿ ಶಬರಿ ಕಾಯುತ್ತಾ ಇದ್ದದ್ದು ಕೂಡ ಆನೆಗೊಂದಿಯ ಪಂಪಾ ಸರೋವರದಲ್ಲಿ ಎಂಬ ನಂಬಿಕೆ ಇದೆ. ರಾಮನಿಗೆ ಆಂಜನೇಯ ಪರಿಚಯವಾಗಿದ್ದು, ಆನೆಗೊಂದಿಯಲ್ಲಿಯೇ. ಅಷ್ಟೇ ಅಲ್ಲದೆ ಸ್ಥಳೀಯವಾಗಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ ಎಂದು ಹೇಳಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲಿಯೇ ಎನ್ನುವ ನಂಬಿಕೆಯಿಂದ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇವಸ್ಥಾನ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಏಕಾಏಕಿಯಾಗಿ ಟಿಟಿಡಿಯವರು ಹೇಳಿಕೆಯನ್ನು ನೀಡಿದ್ದಾರೆ. ಜನರ ಭಾವನೆಯನ್ನು ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.