ಲಕ್ನೋ: ಹತ್ರಾಸ್ ಗ್ಯಾಂಗ್ರೇಪ್ ಪ್ರಕರಣದ ಆರೋಪಿಗಳನ್ನು ಇರಿಸಲಾಗಿರುವ ಜೈಲಿಗೆ ಸ್ಥಳೀಯ ಬಿಜೆಪಿ ಸಂಸದ ರಾಜವೀರ್ ಸಿಂಗ್ ದಿಲೇರ್ ಭೇಟಿ ನೀಡಿರೋದು ಚರ್ಚೆಗೆ ಕಾರಣವಾಗಿದೆ.
ಹತ್ರಾಸ್ ಆರೋಪಿಗಳನ್ನು ಭೇಟಿಯಾಗಲು ಸಂಸದರು ಜೈಲಿಗೆ ಹೋಗಿದ್ದರು. ಆದ್ರೆ ಜೈಲಿನ ಅಧಿಕಾರಿಗಳು ಅರೋಪಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ಹಾಗಾಗಿ ಸಂಸದರು ವಾಪಸ್ ಆಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜವೀರ್ ಸಿಂಗ್ ಜೈಲಿನಿಂದ ಹೊರ ಬರುವ ಫೋಟೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜವೀರ್ ಸಿಂಗ್, ನಾನು ಯಾವುದೇ ಖೈದಿಗಳನ್ನು ಭೇಟಿಯಾಗಲು ಜೈಲಿಗೆ ಹೋಗಿರಲಿಲ್ಲ. ಕ್ಷೇತ್ರದ ಕೆಲಸದ ನಿಮಿತ್ ಎಸ್ಎಸ್ಪಿ ಅವರನ್ನು ಭೇಟಿಯಾಗಲು ತೆರಳಿದ್ದೆ. ಆದ್ರೆ ಎಸ್ಎಸ್ಪಿ ಕೊರೊನಾ ಸೋಂಕಿಗೆ ಒಳಗಾಗಿರುವ ವಿಷಯ ತಿಳಿಯಿತು. ಹಿಂದಿರುಗಿ ಬರುವಾಗ ಜೈಲಿನ ಬಳಿ ನಿಂತಿದ್ದ ಕೆಲವರು ಜೊತೆ ಮಾತನಾಡುತ್ತಾ ನಿಂತಿದ್ದೆ ಎಂದರು.
ಇದೇ ವೇಳೆ ನನ್ನ ಬಳಿ ಬಂದ ಜೈಲರ್ ಟೀ ಕುಡಿಯಲು ಆಹ್ವಾನಿಸಿದ್ದರಿಂದ ಜೈಲಿನ ಒಳಗೆ ಹೋದೆ. ಜೈಲಾಧಿಕಾರಿಗಳ ಜೊತೆ ಓರ್ವ ಬಂಧಿತನ ಬಗ್ಗೆ ಮಾತನಾಡಿದ್ದೆ. ಆತ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಶಿಫಾರಸ್ಸು ಬಗ್ಗೆ ಚರ್ಚಿಸಲಾಯ್ತು. ಅದರ ಹೊರತಾಗಿ ಹತ್ರಾಸ್ ಪ್ರಕರಣದ ಆರೋಪಿಗಳ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನನ್ನ ಭೇಟಿಯನ್ನ ತಪ್ಪಾಗಿ ಅರ್ಥೈಸೋದು ಬೇಡ ಎಂದು ಹೇಳಿದರು.
ಕೆಲವೇ ಕ್ಷಣಗಳಲ್ಲಿ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಲು ಕಾರಣವಾಗಿದ್ದು justiceforhathrasvictim.carrd.co ಹೆಸರಿನ ವೆಬ್ಸೈಟ್ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದು ಮಾತ್ರವಲ್ಲದೇ ದೇಶವ್ಯಾಪಿ ಪ್ರತಿಭಟನೆ ನಡೆಸಲು ಪ್ರೇರೇಪಣೆ ನೀಡಿತ್ತು ಎಂಬ ಗಂಭೀರ ಆರೋಪ ಈ ವೆಬ್ಸೈಟ್ ಮೇಲೆ ಬಂದಿದೆ. ಈ ವೆಬ್ಸೈಟಿನ ಮೂಲವನ್ನು ಪತ್ತೆ ಹಚ್ಚಲು ಮುಂದಾಗುತ್ತಿದ್ದಂತೆ justiceforhathrasvictim.carrd.co ವೆಬ್ಸೈಟ್ ಕಾರ್ಯನಿರ್ವಹಿಸುವುದನ್ನು ಈಗ ನಿಲ್ಲಿಸಿದೆ.