ಕೊಪ್ಪಳ: ಹತ್ತು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಮನೆ ಮಂದಿಗೆ ಸಂತೋಷ, ಆಶ್ಚರ್ಯ ಉಂಟಾಗಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಪಾರ್ವತಮ್ಮ ಗಂಡ ಗುರಬಸಪ್ಪ ಮಾಸ್ತರ ದಂಪತಿಯ ಮೂರು ಮಕ್ಕಳಲ್ಲಿಯ ಒರ್ವ ಮಗ ದೇವರಾಜ ಮಾಸ್ತರ ಹತ್ತು ವರ್ಷಗಳ ಹಿಂದೆ ಮನೆ ತೊರೆದು ಹೋಗಿದ್ದ. ಈಗ ಕೊರೊನಾ ಭೀತಿಯಲ್ಲಿ ಕಂಪನಿಗೆ ರಜೆಯಿಂದ ಪಕ್ಕದ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟದ ಸ್ನೇಹಿತರ ಮೂಲಕವಾಗಿ ಸ್ವಗ್ರಾಮಕ್ಕೆ ಹಿಂತಿರುಗಿ ಬಂದಿದ್ದಾನೆ. ದೇವರಾಜ 2008-09ರಲ್ಲಿ ಬೆಂಗಳೂರಿಗೆ ದುಡಿಯಲೆಂದು ಹೋದವನು ನಾಪತ್ತೆಯಾಗಿದ್ದ. ಮಗ ಕಾಣೆಯಾದ ಹಿನ್ನೆಲೆಯಲ್ಲಿ ಹೆತ್ತವರು ಕಣ್ಣೀರಿನಲ್ಲಿಯೇ ದಿನಗಳನ್ನು ನೂಕುತ್ತಿದ್ದರು. ಇದನ್ನೂ ಓದಿ: ಆಸ್ಪತ್ರೆಗೆ ಚೆಕಪ್ಗೆ ತೆರಳಬೇಕಿದ್ದ ತುಂಬು ಗರ್ಭಿಣಿ ಪರದಾಟ
ಕಳೆದ ದಿನ ಮಧ್ಯಾಹ್ನ ಜುಮಲಾಪೂರ ಗ್ರಾಮದ ಆರಾಧ್ಯನಾದ ಪಾಂಡುರಂಗ ದೇವಾಲಯಕ್ಕೆ ಬಂದು ನಮಸ್ಕರಿಸುವ ಮುನ್ನ ತನ್ನ ಪರಿಚಯವನ್ನು ಹೇಳಿ ಕೊಂಡಾಗ ಸ್ಥಳದಲ್ಲಿದ್ದವರಿಗೆ ಆಶ್ಚರ್ಯವಾಗಿದೆ. ಮಗ ಹಿಂದಿರುಗಿರೋ ವಿಷಯವನ್ನ, ತಂದೆ ತಾಯಿಯ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದ ತಾಯಿ ದೇವಮ್ಮ, ಗುರಬಸಪ್ಪ ಮಾಸ್ತರ ದಂಪತಿ, ಮಗನನ್ನು ನೋಡಿ ಆನಂದಭಾಷ್ಪ ಸುರಿಸಿದ್ದಾರೆ. ಇದನ್ನೂ ಓದಿ: ಕೊಪ್ಪಳದಲ್ಲಿ 50ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ
ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದ ಕಾರಣ ಬೇಸತ್ತು, ಸ್ನೇಹಿತರ ಒಲವಿನಿಂದ ತವರಿಗೆ ಬರುವ ಮನಸ್ಸು ಮಾಡಿದ್ದಾನೆ ಎಂದು ತಂದೆ ಗುರುಬಸಪ್ಪ ತಿಳಿಸಿದ್ದಾರೆ. ಮಗನ ಮರಳಿ ಗೂಡಿಗೆ ಬಂದಿರುವ ಖುಷಿಗೆ ಪಾರವೇ ಇರಲಿಲ್ಲ, ಮನೆಯ ತುಂಬ ಜನವೋ… ಜನ ಸೇರಿ ಸಂತಸದ ಕ್ಷಣಗಳನ್ನು ನೆನಪಿಸಿದರು.
ಹತ್ತು ವರ್ಷ ಕಾದ ನಮಗೆ ಗುಡದೂರ ದೊಡ್ಡಬವರ್ಯಾ ತಾತ ನಿನ್ನ ಮಗ ಬಂದೆ ಬರುತ್ತಾನೆ ಎನ್ನುವ ವಾಕ್ಯ ನಿಜವಾಯಿತು. ಮಗ ಬಂದಿರುವುದು ನಮ್ಮ ಮನೆಯವರು ಮಾಡಿದ ಪುಣ್ಯ ಕಣ್ರಿ ಎನ್ನುತ್ತಾ ಬಂದವರಿಗೆಲ್ಲ ಸಿಹಿಹಂಚುತ್ತಾ ಲವಲವಿಕೆಯಿಂದ ದೇವರಾಜನ ತಾಯಿ ಮನೆಮಂದಿಗೆಲ್ಲ ಫೋನ್ ಕರೆಮಾಡಿದ್ದಾರೆ.