ಚಿಕ್ಕೋಡಿ: ಮುಂಬರುವ ಎಂಟರಿಂದ ಹತ್ತು ದಿನಗಳಲ್ಲಿ ನನ್ನ ಮುಂದಿನ ರಾಜಕೀಯ ನಿರ್ಣಯ ಪ್ರಕಟಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರ ಬೀಳಿಸಿ, ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ: ರಮೇಶ್ ಜಾರಕಿಹೊಳಿ
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು, ಎಂಟು-ಹತ್ತು ದಿನಗಳಲ್ಲಿ ನನ್ನ ರಾಜಕೀಯ ನಿರ್ಣಯ ತೆಗೆದುಕೊಳ್ಳುತ್ತೇನೆ, ಅಲ್ಲಿಯ ವರೆಗೆ ಯಾವುದೇ ರೀತಿ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುವುದಿಲ್ಲ. ಈ ಕುರಿತು ಹಿರಿಯರು ಖಾರವಾಗಿ ಹೇಳಿದ್ದಾರೆ. ಹೀಗಾಗಿ ನಾನು ಸದ್ಯ ಯಾವುದೇ ಹೇಳಿಕೆ ನೀಡುವದಿಲ್ಲ. ನಿನ್ನೆ ನಾನು ನೀಡಿರುವ ಹೇಳಿಕೆಗಳಿಗೆ ಬದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸುತ್ತೂರು ಶ್ರೀಗಳ ತಾಯಿ ಸಾವನ್ನಪ್ಪಿದ ಕಾರಣ ಸಾಂತ್ವನ ಹೇಳಲು ಸುತ್ತೂರು ಮಠಕ್ಕೆ ಹೋಗಿದ್ದೆ ಅದರಲ್ಲಿ ಏನೂ ರಾಜಕೀಯವಿಲ್ಲ. ಅಥಣಿ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ, ಇಂದೂ ಕೂಡ ಕೋವಿಡ್ ನಿಂದ ಮೃತಪಟ್ಟ ಆಪ್ತರ ಮನೆಗೆ ಭೇಟಿ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಅವರ ಆಪ್ತ ಶಾಸಕ ಮಹೇಶ ಕುಮಟಳ್ಳಿ ಸೇರಿದಂತೆ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ನಿನ್ನೆ ಮೈಸೂರಲ್ಲಿ ಮಾತನಾಡಿದ್ದ ಅವರು, ಇನ್ನೊಬ್ಬರನ್ನ ಸಚಿವನನ್ನಾಗಿ ಮಾಡುವ ಶಕ್ತಿ ಇರುವ ನಾನು, ಸಚಿವನಾಗೋಕೆ ಲಾಬಿ ಮಾಡುತ್ತೇನಾ? ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದ್ದವನು ನಾನು. ಇಲ್ಲಿ ಸಚಿವ ಸ್ಥಾನದ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ. ಮನಸ್ಸು ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದು ಸತ್ಯ. ಆದರೆ ಕೆಲವು ಹಿರಿಯರ ಸಲಹೆಯ ಮೇರೆಗೆ ಈಗ ಅದನ್ನು ಕೈಬಿಟ್ಟಿದ್ದೇನೆ. 8 ರಿಂದ 10 ದಿನ ನನ್ನನ್ನು ಬಿಟ್ಟು ಬಿಡಿ, ನಾನು ಏನೂ ಮಾತಾಡಲ್ಲ ಎಂದು ಹೇಳಿದ್ದರು.