– ಯತ್ನಾಳ್, ರೇಣುಕಾಚಾರ್ಯ ಮಂತ್ರಿ ಆಗ್ಬೇಕಿತ್ತು
ರಾಮನಗರ: ಎಂಟಿಬಿ ಹಾಗೂ ನಿರಾಣಿ ಹಣವಂತರಾಗಿದ್ದಾರೆ. ಹೀಗಾಗಿ ಅವರನ್ನು ಮಂತ್ರಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಿಜೆಪಿಯ ನೂತನ ಮಂತ್ರಿಮಂಡಲ ವಿರುದ್ಧ ಕಿಡಿಕಾರಿದ ಅವರು, ಯಡಿಯೂರಪ್ಪನವರ ಮಂತ್ರಿಮಂಡಲ ಸರಿಯಿಲ್ಲ. ಅವರಿಗೆ ಹೇಳೋರು, ಕೇಳೋರು ಯಾರು ಇಲ್ಲ. ಬೇಕಾಬಿಟ್ಟಿಯಾಗಿ ಮಂತ್ರಿಮಂಡಲ ರಚನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಂಟಿಬಿ ಹಣವಂತ, ನಿರಾಣಿ ಹಣವಂತ ಹಾಗಾಗಿ ಮಂತ್ರಿ ಮಾಡಿದ್ದಾರೆ. ಯೋಗೇಶ್ವರ್ ಗೆ ಯಾಕೆ ಮಂತ್ರಿ ಸ್ಥಾನ. ಸೋತವರಿಗೆ ಎಂಎಲ್ಸಿ ಮಾಡಿದರು. ವಿಧಾನಸೌಧದಲ್ಲಿ ಮಾಡಬಾರದ ಅನಾಚಾರ ಮಾಡಿದ್ದಾರೆ. ಬಾಂಬೆಯಲ್ಲಿ ಶಾಸಕರನ್ನು ಇಟ್ಟುಕೊಂಡು ಸರ್ಕಾರ ಕೆಡವಿದರು. ಆದರೆ ಈ ಸರ್ಕಾರದಲ್ಲಿ ಅಂಥವರು ಸಚಿವರಾಗ್ತಿದ್ದಾರೆ ಎಂದು ಗರಂ ಆದರು.
ಯಡಿಯೂರಪ್ಪನವರ ಮಂತ್ರಿಮಂಡಲಕ್ಕೆ ಬೆಲೆಯಿಲ್ಲ. ಬ್ಲಾಕ್ ಮೇಲ್ ಮುಖ್ಯಮಂತ್ರಿ ಯಡಿಯೂರಪ್ಪ. ಇವತ್ತು ಮಂತ್ರಿಮಂಡಲದಲ್ಲಿ ವ್ಯಾಪಾರ ನಡೆಯುತ್ತಿದೆ. ಕೆಲವರು ವ್ಯಾಪಾರ ಮಾಡಿ ಮಂತ್ರಿಯಾಗ್ತಿದ್ದಾರೆ. ಯತ್ನಾಳ್ ಹಾಗೂ ರೇಣುಕಾಚಾರ್ಯ ಮಂತ್ರಿಯಾಗಬೇಕಿತ್ತು. ಮೈಸೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಿಗೆ ಮಂತ್ರಿಸ್ಥಾನ ಇಲ್ಲ ಎಂದು ವಾಟಾಳ್ ಸಿಡಿಮಿಡಿಗೊಂಡರು.