– ಹಟ್ಟಿ ಸಮುದಾಯ ಭವನ ಕೋವಿಡ್ ಕೇರ್ ಸೆಂಟರ್ಗೆ ಬಳಕೆ
– ಹಟ್ಟಿ ಚಿನ್ನದ ಗಣಿ ಚಟುವಟಿಕೆ ತಾತ್ಕಾಲಿಕ ಸ್ಥಗಿತ
ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್ಗೆ ಬಳಕೆ ಮಾಡಿಕೊಳ್ಳಲು ನಿರ್ಧಾರಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಅವರು ನೀಡಿದ ಸಲಹೆ ಮೇರೆಗೆ ಹಟ್ಟಿಯಲ್ಲಿರುವ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್ಗೆ ಬಳಕೆಮಾಡಿಕೊಳ್ಳಲು ಮುಂದಾಗಿದೆ.
ಹಟ್ಟಿಯ ಕ್ಯಾಂಪಸ್ನಲ್ಲಿರುವ ಒಟ್ಟು 120 ಹಾಸಿಗೆ ಸಾಮಥ್ರ್ಯದ ಈ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಆಮ್ಲಜನಕಯುಕ್ತ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿದೇರ್ಶಕರು ಸೇರಿದಂತೆ ಮತ್ತಿತರರ ಜೊತೆ ಸಚಿವ ನಿರಾಣಿ ಮಾತುಕತೆ ನಡೆಸಿದ್ದಾರೆ. ಹಟ್ಟಿಯ ಚಿನ್ನದ ಗಣಿಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಾಹಿಸುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲೂ ಸಾವಿರಾರು ಸಂಖ್ಯೆಯ ಜನರಿದ್ದು, ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ತಕ್ಷಣವೇ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಸಮುದಾಯ ಭವನ ಬಳಕೆಮಾಡಿಕೊಳ್ಳುವುದು ಸರಿಯಾದ ಮಾರ್ಗವೆಂದು ಸಚಿವರು ಸಲಹೆ ಕೊಟ್ಟಿದ್ದರು.
ಸಂಬಂಧಪಟ್ಟವರ ಜೊತೆ ಮಾತುಕತೆ:
ಹಟ್ಟಿ ಚಿನ್ನದ ಗಣಿಯಲ್ಲಿ ಕೇಂದ್ರ ಸರಕಾರಿ ಒಡೆತನದ ಕೇಂದ್ರೀಯ ವಿದ್ಯಾಲಯವಿದ್ದು, ಇದನ್ನು ಸಹ ಕೋವಿಡ್ ಕೇರ್ ಸೆಂಟರ್ಗೆ ಬಳಸಲು ಆಲೋಚಿಸಲಾಗಿದೆ. ಈ ಜಾಗವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿರುವ ಹಿನ್ನಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಾಣಿ ಅವರು ಮಾತುಕತೆಯ ನಡೆಸಿದ್ದು, ಇದು ಕೂಡ ಫಲಪ್ರದವಾಗಿದೆ ಸಂಭವವಿದೆ.
ತಾತ್ಕಾಲಿಕ ಸ್ಥಗಿತ:
ರಾಜ್ಯದಲ್ಲಿ ಈಗ ಚಿನ್ನ ಉತ್ಪಾದಿಸುವ ಏಕೈಕ ಗಣಿ ಇರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯು ಕೊರೊನಾ ಎರಡನೆಯ ಅಲೆಯ ಹಿನ್ನಲೆ ಈ ವರ್ಷವೂ ಬಂದ್ ಮಾಡಲಾಗಿದೆ. ರಾಜ್ಯ ಸರಕಾರವು 14 ದಿನ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲಿಯೇ ಹಟ್ಟಿ ಚಿನ್ನದ ಗಣಿಯನ್ನು ಸಹ ಬಂದ್ ಮಾಡಲಾಗಿದೆ. ಮೇ 24ರವರೆಗೂ ಗಣಿ ಚುಟುವಟಿಕೆ ಬಂದ್ ಮಾಡಿ ಹಟ್ಟಿ ಚಿನ್ನದ ಗಣಿ ಕಂಪನಿಯೂ ಆದೇಶ ಹೊರಡಿಸಿದೆ.
ಸಿಬ್ಬಂದಿ ಮನೆಯಲ್ಲಿ ಇರುವಂತೆ ಹಟ್ಟಿ ಕಂಪನಿ ಆಡಳಿತ ಮಂಡಳಿ ಆದೇಶ ಹೊರಡಿಸಿದ್ದು, ಹಟ್ಟಿ ಚಿನ್ನದ ಗಣಿ ಆಸ್ಪತ್ರೆ, ಸೇರಿದಂತೆ ಅವಶ್ಯಕ ವಿಭಾಗ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿದೆ. ಸಿಬ್ಬಂದಿ ಹಟ್ಟಿ ಕೇಂದ್ರ ಸ್ಥಾನ ಬಿಡುವಾಗ ಅನುಮತಿ ಪಡೆದು ಹೋಗಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಚಿನ್ನದ ಗಣಿ ಬಂದ್ ಮಾಡಿ ಆದೇಶ ಮಾಡಲಾಗಿದೆ.