– ಯುವಕನ ಕಾರ್ಯಕ್ಕೆ ಜಿಲ್ಲಾಡಳಿತ ಸೇರಿದಂತೆ ಜನರಿಂದ ಮೆಚ್ಚುಗೆ
ಯಾದಗಿರಿ: ಸದ್ಯ ಯಾದಗಿರಿ ಜಿಲ್ಲಾದ್ಯಂತ ಕರೊನಾ ಎರಡನೆ ಅಲೆ ಆರ್ಭಟಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ಹಬ್ಬಿರುವುದರಿಂದ ಸೋಂಕಿನ ಚೈನ್ ಲಿಂಕ್ ಕಟ್ ಮಾಡಲು ಅಧಿಕಾರಿಗಳು ಹರಸಹಾಸಪಡುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ತನ್ನ ತಾಲೂಕಿನ 30ಕ್ಕೂ ಅಧಿಕ ಹಳ್ಳಿಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಮೂಲಕ ದೇವಿಕೆರಾ ಗ್ರಾಮದ ರಂಗನಗೌಡ ಎಂಬಾತ ಇತರೆ ಯುವಕರಿಗೆ ಮಾದರಿಯಾಗಿದ್ದಾನೆ.
ಸುರಪುರ ತಾಲೂಕಿನ ಓರ್ವ ರೈತನ ಮಗನಾಗಿರುವ ರಂಗನಗೌಡ, ಕೊರೊನಾದ ಸಂಕಷ್ಟದ ಸಮಯದಲ್ಲಿ ಬಡವರಿಗೆ ಮತ್ತು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನ್ನದಾತ ಫೌಂಡೆಶನ್ ಆರಂಭಿಸಿದ್ದಾರೆ. ಸದ್ಯ ಗ್ರಾಮೀಣ ಭಾಗದಲ್ಲಿ ಕೊರೊನಾ ತಾಂಡವಾಡುತ್ತಿದ್ದು, ಸೋಂಕು ಹಬ್ಬವುದನ್ನು ತಡೆಗಟ್ಟಲು ತನ್ನ ಸ್ವಂತ ಖರ್ಚಿನಲ್ಲಿ ವಿಶೇಷ ಟ್ರಾಕ್ಟರ್ ಮೂಲಕ ಸುರಪುರ ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಸಿಂಪಡಣೆಗೆ ಮುಂದಾಗಿದ್ದಾರೆ.
ಇಷ್ಟೇ ಅಲ್ಲದೇ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ತನ್ನ ಕೈಲಾದ ಸಹಾಯವನ್ನು ರಂಗನಗೌಡ ಮಾಡುತ್ತಿದ್ದಾನೆ. ತನ್ನ ಈ ಕಾರ್ಯವನ್ನು ಎಲೆ ಮರೆಯ ಕಾಯಿಯಂತೆ ನಿಸ್ವಾರ್ಥವಾಗಿ ನಡೆಸಿಕೊಂಡು ಬರುತ್ತಿರುವ ರಂಗನಗೌಡ ಕಾರ್ಯಕ್ಕೆ ಅಧಿಕಾರಿಗಳು ಸೇರಿದಂತೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.