– ಅಪಘಾತ ಮಾಡಿ ಆಸ್ಪತ್ರೆಗೆ ಹೋಗದೆ ಮನೆಗೆ ಬಂದು ಸೂಸೈಡ್
ಬೆಂಗಳೂರು: ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ನಲ್ಲಿ ನಡೆದಿದೆ.
ಕೌಶಿಕ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೃತ ಕೌಶಿಕ್ ಆನೇಕಲ್ಲಿನ ಅಲೈನ್ಸ್ ಕಾಲೇಜಿನಲ್ಲಿ ಲಾ ವ್ಯಾಸಂಗ ಮಾಡುತ್ತಿದ್ದನು. ಕಾಲೇಜು ರಜಾ ಇರುವುದರಿಂದ ಪಕ್ಕದಲ್ಲಿನ ಈಡನ್ ಗಾರ್ಡನ್ನಲ್ಲಿ ಮನೆ ಮಾಡಿಕೊಂಡು ವಾಸವಿದ್ದನು.
ಮೃತ ಕೌಶಿಕ್ ಭಾನುವಾರ ರಾತ್ರಿ ಸ್ನೇಹಿತನ ಜೊತೆ ಹೋಗಿ ಕುಡಿದು ಪಾರ್ಟಿ ಮಾಡಿದ್ದನು. ಪಾರ್ಟಿ ಮುಗಿಸಿ ಹೊಸೂರಿನಿಂದ ಬರುವಾಗ ಕಾರು ಅಪಘಾತಕ್ಕೀಡಾಗಿತ್ತು. ಆನೇಕಲ್-ಹೊಸೂರು ರಸ್ತೆಯ ಗುಡ್ಡನಹಳ್ಳಿಯಲ್ಲಿ ಕಾರು ಅಪಘಾತವಾಗಿದ್ದು, ಪಲ್ಟಿಯಾದ ರಭಸಕ್ಕೆ ಕಾರು ಮೂರು ಪಲ್ಟಿ ಹೊಡೆದಿತ್ತು. ಈ ವೇಳೆ ಸ್ಥಳೀಯರು ಕೌಶಿಕ್ನನ್ನು ರಕ್ಷಿಸಿ ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಕೌಶಿಕ್ ಆಸ್ಪತ್ರೆಗೆ ಹೋಗದೆ ಮನೆಗೆ ಬಂದಿದ್ದನು.
ಮನೆಯ ಮೊದಲ ಮಹಡಿಯಲ್ಲಿ ಬೀಗ ಒಡೆದು ಸ್ನೇಹಿತನ ಜೊತೆ ಕೌಶಿಕ್ ಮನೆಯೊಳಗೆ ಹೋಗಿದ್ದನು. ಮನೆ ಒಳಗೆ ಹೋದ ನಂತರ ಸ್ನೇಹಿತನನ್ನು ರೂಮಿನಲ್ಲಿ ಕೂಡಿ ಹಾಕಿ ಕೌಶಿಕ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ರೂಮಿನಲ್ಲಿದ್ದ ಸ್ನೇಹಿತ ಕೂಗಾಡಿಕೊಂಡ ನಂತರ ಸ್ಥಳೀಯರು ಬಂದು ನೋಡಿದ್ದಾರೆ. ಆದರೆ ಅಷ್ಟರಲ್ಲಿ ಕೌಶಿಕ್ ಸಾವನ್ನಪ್ಪಿದ್ದನು.
ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕೌಶಿಕ್ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.