ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕನೋರ್ವ ತಮ್ಮ ಸ್ಕೂಟರ್ನಲ್ಲಿ ಮಿನಿ ಸ್ಕೂಲ್, ಲೈಬ್ರರಿಯನ್ನು ನಿರ್ಮಿಸುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.
ಹೌದು, ಕೊರೊನಾ ಸಮಯದಲ್ಲಿ ಶಾಲೆಗಳನ್ನು ದೀರ್ಘಕಾಲ ಮುಚ್ಚಿದೆ. ಹೀಗಾಗಿ ಚಂದ್ರ ಶ್ರೀವಾಸ್ತವ್ ಎಂಬ ಶಿಕ್ಷಕ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತನ್ನ ಸ್ಕೂಟರ್ ಮೇಲೆ ಮಿನಿ ಸ್ಕೂಲ್ ಲೈಬ್ರರಿಯನ್ನು ನಿರ್ಮಿಸಿದ್ದಾರೆ.
ಫೋಟೋದಲ್ಲಿ ಶಿಕ್ಷಕ ಹೊರಗಡೆ ಮರದ ಕೆಳಗೆ ಮಕ್ಕಳನ್ನು ಕೂರಿಸಿಕೊಂಡು ಮೈಕ್ ಬಳಸಿ ಪದ್ಯವನ್ನು ಹೇಳಿಕೊಡುತ್ತಿದ್ದು, ಮಕ್ಕಳೆಲ್ಲ ಒಟ್ಟಾಗಿ ಪದ್ಯವನ್ನು ಪಠಿಸುತ್ತಿರುವುದನ್ನು ಕಾಣಬಹುದಾಗಿದೆ. ಮಕ್ಕಳಿಗಾಗಿ ಶಿಕ್ಷಕರು ನಿಯಮಿತವಾಗಿ ತರಗತಿ ತೆಗೆದುಕೊಳ್ಳುತ್ತಿರುವುದಕ್ಕೆ ಪೋಷಕರು ಧನ್ಯವಾದ ತಿಳಿಸಿದ್ದಾರೆ.
ಮಕ್ಕಳಿಗೆ ಪಾಠ ಹೇಳಿಕೊಡಲು ಸ್ಕೂಟರ್ ಮೇಲೆ ಒಂದು ಗ್ರೀನ್ ಕಲರ್ ಬೋರ್ಡ್ ನಿರ್ಮಿಸಲಾಗಿದ್ದು, ಮತ್ತೊಂದೆಡೆ ಪಠ್ಯಪುಸ್ತಕಗಳು ಮತ್ತು ಕೆಲವು ನೋಟ್ ಬುಕ್ಗಳನ್ನು ಇರಿಸಲಾಗಿದೆ. ಅಲ್ಲದೆ ಚಂದ್ರ ವಾಸ್ತವ್ ಮಕ್ಕಳಿಗೆ ಕೆಲವು ಪುಸ್ತಕಗಳನ್ನು ಉಚಿತವಾಗಿ ನೀಡಿದ್ದಾರೆ. ಇತರ ಪಠ್ಯಪುಸ್ತಕ ಮತ್ತು ಕಥೆ ಪುಸ್ತಕಗಳನ್ನು ನಿಗದಿತ ಸಮಯದೊಳಗೆ ಹಿಂದಿರುಗಿಸಬೇಕು ಎಂದು ಷರತ್ತು ಹಾಕಿ ನೀಡಿದ್ದಾರೆ.
ಈ ವಿಚಾರವಾಗಿ ಶಿಕ್ಷಕ ಚಂದ್ರ ವಾಸ್ತವ್ ಹೆಚ್ಚಿನ ವಿದ್ಯಾರ್ಥಿಗಳು ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಸ್ಮಾರ್ಟ್ಫೋನ್ ತೆಗೆದುಕೊಳ್ಳಲಾಗದ ಕಾರಣ ಆನ್ಲೈನ್ ಶಿಕ್ಷಣ ಪಡೆಯಲಾಗುತ್ತಿಲ್ಲ. ಹಾಗಾಗಿ ನಾನು ಪಾಠ ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿದ ವಿದ್ಯಾರ್ಥಿ, ಕೊರೊನಾ ಬಿಕ್ಕಿಟ್ಟಿನಿಂದ ಶಾಲೆಯನ್ನು ಮುಚ್ಚಲಾಗಿದೆ. ಹಾಗಾಗಿ ಶಿಕ್ಷಕರು ಇಲ್ಲಿ ಬಂದು ನಮಗೆ ಗಣಿತ ಮತ್ತು ಇತರ ವಿಷಯಗಳ ಬಗ್ಗೆ ಪಾಠ ಮಾಡುತ್ತಾರೆ ಎಂದು ಹೇಳಿದ್ದಾರೆ.